
ಮಂಡ್ಯ: ಕೆಲ ದಿನಗಳ ಹಿಂದೆ K.R.S ಡ್ಯಾಂನ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಾ ಬಂದಿತ್ತು. ಆದ್ರೆ ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರೀ ಮಳೆಗೆ ಜೀವ ನದಿ ಕಾವೇರಿ ಉಕ್ಕಿ ಹರಿದಿದ್ದು, ಡ್ಯಾಂನ ಒಳ ಹರಿವಿನ ಪ್ರಮಾಣ 20 ಸಾವಿರ ಕ್ಯೂಸೆಕ್ ಗಡಿ ಮುಟ್ಟಿದೆ.

J3tvkannada
ಕೊಡಗು ಹಾಗೂ ಭಾಗಮಂಡಲದಲ್ಲಿ ಕಳೆದೆರಡು ದಿನಗಳಿಂದ ಅಧಿಕವಾಗಿ ಮಳೆ ಆಗ್ತಿದೆ. ಇದರ ಪರಿಣಾಮವಾಗಿ K.R.S ಡ್ಯಾಂನ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮಂಗಳವಾರದ ಮಾಹಿತಿ ಪ್ರಕಾರ 19,129 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರ್ತಿದೆ. ಇದರಿಂದಾಗಿ ಡ್ಯಾಂನ ಇಂದಿನ ನೀರಿನ ಮಟ್ಟ 92 ಅಡಿಗೆ ಏರಿಕೆಯಾಗಿದೆ. ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಇದೇ ರೀತಿ ಮಳೆ ಮುಂದುವರೆದರೆ ಆದಷ್ಟು ಬೇಗ ಡ್ಯಾಂ ಗರಿಷ್ಠ ಮಟ್ಟ ತಲುಪಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಇನ್ನು ಡ್ಯಾಂನ ಹೊರ ಹರಿವು 354 ಕ್ಯೂಸೆಕ್ ಇದ್ದು, ಡ್ಯಾಂನಲ್ಲಿ 17.163 ಟಿ.ಎಂ.ಸಿ ನೀರು ಶೇಖರಣೆಯಾಗಿದೆ. ಸದ್ಯ ನಾಲೆಗಳಿಗೆ ಹರಿಯುತ್ತಿದ್ದ ನೀರನ್ನು ನಿಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಡ್ಯಾಂಗೆ ಹರಿದು ಬರುವ ನೀರಿನ ಪ್ರಮಾಣವನ್ನ ಆಧರಿಸಿ ಹಾಗೂ ರೈತರ ಅವಶ್ಯಕತೆಗಳನ್ನು ಗಮನಿಸಿ ನಾಲೆಗಳಿಗೆ ನೀರು ಹರಿಸುವ ಸಾಧ್ಯತೆ ಇದೆ. ಒಟ್ಟಾರೆ ಡ್ಯಾಂನ ಒಳ ಹರಿವಿನ ಹೆಚ್ಚಳದಿಂದ ಮಂಡ್ಯ ಭಾಗದ ರೈತರಲ್ಲಿ ಸಂತಸ ಮೂಡಿದೆ.