
ಶಿವಮೊಗ್ಗ: ಶಿರಾಳಕೊಪ್ಪ ಪಟ್ಟಣ ಸಮೀಪದ ನೇರಲಗಿ ದೊಡ್ಡಕೆರೆಯಲ್ಲಿ ಅಪಾರ ಪ್ರಮಾಣದ ಮೀನುಗಳು ಸತ್ತಿದ್ದು, ಕೆರೆಯಂಚಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ.

j3tvkannada
ಕಳೆದ ನಾಲ್ಕು ದಿನಗಳಿಂದ ಮೀನು ಸಾಯುತ್ತಿದ್ದು, ಈವರೆಗೆ ಅಂದಾಜು 4 ಕ್ವಿಂಟಾಲ್ನಷ್ಟು ಸತ್ತಿರುವುದಾಗಿ ಮೀನು ಸಾಕಣೆದಾರ ಹನೀಫ್ಸಾಬ್ ಮಾಹಿತಿ ನೀಡಿದರು. ಕೆರೆ ಮೇಲ್ಬಾಗದಲ್ಲಿ ಒಣಶುಂಠಿ ಒಣಗಿಸುವ ಮೂರು ಕಣಗಳಿವೆ. ಅವುಗಳಿಗೆ ಬಳಸುವ ರಾಸಾಯನಿಕವು ಮಳೆ ನೀರಿನೊಂದಿಗೆ ಕೆರೆ ಸೇರಿರುವ ಸಾಧ್ಯತೆಯಿದೆ. ಕಿಡಿಗೇಡಿಗಳು ವಿಷ ಹಾಕಿರಬಹುದು ಅಥವಾ ಬಿಸಿಲ ಬೇಗೆಯಿಂದಲೂ ಹೀಗಾಗಿರಬಹುದು ಎನ್ನಲಾಗಿದೆ. ಮೀನು ಸಾವಿಗೆ ನಿಖರ ಕಾರಣ ಗೊತ್ತಿಲ್ಲ. ಆದರೆ ಎರಡು ವರ್ಷದಿಂದ ಮೀನು ಹಿಡಿಯದೆ ಹಾಗೆ ಬಿಟ್ಟಿದ್ದೆ. ಮೀನುಗಳು ದೊಡ್ಡ ಗಾತ್ರವಾಗಿದ್ದು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾಗಲೇ ಹೀಗಾಗಿದೆ. ಅಪಾರ ನಷ್ಟ ಆಗಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ಹನೀಫ್ಸಾಬ್ ಆಗ್ರಹಿಸಿದ್ದಾರೆ.