
ಗದಗ: ಕಳೆದ 30 ವರ್ಷಗಳಿಂದಲೂ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸಿದರೂ ಸಹ ಯಾವುದೇ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಒಳ ಮೀಸಲಾತಿ ಜಾರಿಗೊಳಿಸಿ ಇಲ್ಲವೇ ಕುರ್ಚಿ ಕಾಲಿ ಮಾಡಿ ಎಂದು ಪ್ರಭುರಾಜ್ ಕೊಡ್ಲಿ ಹೇಳಿದರು. ಲಕ್ಷ್ಮೀಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಮಾದಿಗ ಸಮೂದಾಯ ವತಿಯಿಂದ ಶನಿವಾರ ನಡೆದ ಕ್ರಾಂತಿಕಾರಿ ರಥಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು. ಒಳ ಮೀಸಲಾತಿ ಜಾರಿ ಆಗುವವರೆಗೆ ಸರ್ಕಾರಿ ಹುದ್ದೆಗಳ ಹೊಸ ನೇಮಕಾತಿ, ಮುಂಬಡ್ತಿ ಮತ್ತು ಬ್ಯಾಕ್ಲಾಗ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಬಾರದು. ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು. ಸಮುದಾಯದ ಶಾಸಕರು, ಸಚಿವರು ಸಂಪುಟದಲ್ಲಿ ಹೋರಾಟದ ಪರವಾಗಿ ಧ್ವನಿ ಎತ್ತಬೇಕು’ ಎಂದು ಹೇಳಿದರು.

j3tvkannada
ಮಲ್ಲೇಶ ಮಾತನಾಡಿ, ಕ್ರಾಂತಿಕಾರಿ ರಥಯಾತ್ರೆಯು ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ, ಸಮುದಾಯದ ಹೋರಾಟಗಾರ ಬಿ.ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೂ ನಡೆಯುತ್ತಿದೆ. ಒಳ ಮೀಸಲಾತಿ ಹೋರಾಟ ಸಮಿತಿಯ ನೇತೃತ್ವ ವಹಿಸಿರುವ ಭಾಸ್ಕರ್ ಪ್ರಸಾದ್ ಅವರ ಕೈ ಬಲಪಡಿಸಬೇಕು. ಜಾತಿ ಗಣತಿ ಸಮೀಕ್ಷೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಒಳಪಂಗಡಗಳ ಹೆಸರನ್ನು ಸ್ಪಷ್ಟವಾಗಿ ಬರೆದುಕೊಳ್ಳುವಂತೆ ಹೇಳಬೇಕು. ಒಳ ಮೀಸಲಾತಿ ಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು. ಗ್ರಾಮದಲ್ಲಿ ಕ್ರಾಂತಿಕಾರಿ ರಥಯಾತ್ರೆ ನಡೆಯಿತು. ಮೆರವಣಿಗೆ ಯುದ್ದಕ್ಕೂ ಘೋಷಣೆಗಳು ಕೇಳಿ ಬಂದವು. ಎನ್.ಡಿ. ಮೇಗಲಮನಿ, ಹನುಮಂತ ಛಬ್ಬಿ, ಕರಿಯಪ್ಪ ಶಿರಹಟ್ಟಿ, ಮೈಲಾರಪ್ಪ, ಡಿ.ಎಚ್.ಚಂದ್ರು, ಮನೋಹರ ಕರ್ಜಗಿ, ಶಿವಾನಂದ ಮೇಗಲಮನಿ, ಮಾರ್ತಾಂಡಪ್ಪ ಗಾಳೆಪ್ಪನವರ, ಸೋಮಣ್ಣ ಯತ್ತಿನಹಳ್ಳಿ, ಗುಡ್ಡಪ್ಪ ಮತ್ತೂರ, ಬಸವರಾಜ ಹೊಸಮನಿ ಇದ್ದರು.