
ವಿಜಯಪುರ: ರಸ್ತೆ ಬದಿ ಪುಟ್ಟ ಟೀ, ಬೀಡ ಗೂಡಂಗಡಿ ಇಟ್ಟುಕೊಂಡು ಉಪಜೀವನ ನಡೆಸುತ್ತಿರುವ ಕುಟುಂಬದ ವಿದ್ಯಾರ್ಥಿನಿಯೊಬ್ಬಳು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ಎರಡನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ.

j3tvkannada
ಪಟ್ಟಣದ ಆಶ್ರಯ ಕಾಲೊನಿ ನಿವಾಸಿ, ಮುದ್ದೇಬಿಹಾಳ ವಿಬಿಸಿ ಪ್ರೌಢಶಾಲೆ ಮುಂದೆ ಟೀ ಮಾರಿ ಉಪಜೀವನ ಸಾಗಿಸುವ ಬಸವರಾಜ ಹಳ್ಳದ ಹಾಗೂ ಸುರೇಖಾ ಹಳ್ಳದ ದಂಪತಿ ಪುತ್ರಿ ವಾಣಿಶ್ರೀ ಹಳ್ಳದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 97.83 ಅಂಕಗಳನ್ನು ಪಡೆದುಕೊಂಡಿದ್ದಾರೆ.
ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನ ಹೆಸರು ತಂದಿದ್ದಾಳೆ. ಆದರೆ, ಮನೆಯಲ್ಲಿ ಬಡತನದ ಕಾರಣದಿಂದ ಆಕೆಯ ಭವಿಷ್ಯದ ಶಿಕ್ಷಣಕ್ಕೆ ಅಡ್ಡಿಯಾಗುವ ಆತಂಕವನ್ನು ಪೋಷಕರು ವ್ಯಕ್ತಪಡಿಸುತ್ತಿದ್ದಾರೆ.
ಇರಲು ಸ್ವಂತ ಮನೆಯಿಲ್ಲದೇ ತಾಯಿಯ ಮನೆಯಲ್ಲಿರುವ ಸುರೇಖಾ ಹಳ್ಳದ ಅವರು ತಮ್ಮ ಮಗಳು ಎಲ್ಲಿಯವರೆಗೆ ಓದುತ್ತೇನೆ ಎನ್ನುತ್ತಾಳೋ ಅಲ್ಲಿಯವರೆಗೂ ಓದಿಸುತ್ತೇನೆ ಎಂದು ಹೇಳುತ್ತಾರೆ. ಅಲ್ಲದೇ, ನಾಗರಬೆಟ್ಟದ ಮಠ್ಸ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಬಿ.ಜಿ.ಮಠ, ಪ್ರಾಚಾರ್ಯ ಇರ್ಫಾನ್ ಬಾಗವಾನ ಅವರ ಸಹಾಯವನ್ನು ಸ್ಮರಿಸುತ್ತಾರೆ. ಕಾಲೇಜಿನ ಪ್ರಾಚಾರ್ಯ ಇರ್ಫಾನ ಬಾಗವಾನ ಮಾತನಾಡಿ, ವಾಣಿಶ್ರೀ ಹಳ್ಳದ ಅವಳ ಸಾಧನೆಗೆ ಸಂಸ್ಥೆಯಿಂದ ನೀಟ್ ಓದಲು ಅನುಕೂಲ ಕಲ್ಪಿಸಿಕೊಡಲಾಗಿದ್ದು, ಮೆಡಿಕಲ್ ಸೀಟು ದೊರೆತರೆ ಅರ್ಧದಷ್ಟು ಶುಲ್ಕವನ್ನು ಸಂಸ್ಥೆ ಭರಿಸಲಿದೆ ಎಂದು ಅಧ್ಯಕ್ಷರು ಮಾತು ನೀಡಿದ್ದಾರೆ ಎಂದು ತಿಳಿಸಿದರು.