
ದಾವಣಗೆರೆ: ಆಧುನೀಕರಣದ ಭರಾಟೆಯಿಂದಾಗಿ ಮರೆಯಾಗುತ್ತಿರುವ ಜಾನಪದ ಕಲೆ, ಸಂಸ್ಕೃತಿಯನ್ನು ಪರಿಚಯಿಸಲು ಕಾಲೇಜುಗಳಲ್ಲಿ ‘ಜಾನಪದ ಉತ್ಸವ’ ಹಮ್ಮಿಕೊಳ್ಳುವ ಕುರಿತಾದ ಕಾಲೇಜು ಶಿಕ್ಷಣ ಇಲಾಖೆಯ ಆದೇಶವು ಯುವಜನರಲ್ಲಿ ಹೊಸ ಹುರುಪು ಮೂಡಿಸಿದೆ.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಶನಿವಾರ ‘ಜಾನಪದ ಉತ್ಸವ’ ಆಯೋಜಿಸಲು ಸಕಲ ಸಿದ್ಧತೆಗಳು ನಡೆದಿದ್ದು, ವಿವಿಧ ಜಾನಪದ ಕಲಾ ಪ್ರಕಾರಗಳ ಸೊಗಡು ಮೇಲೈಸಲಿದೆ.
ಕಾಲೇಜು ಒಳಾಂಗಣದಲ್ಲಿ ಬೃಂದಾವನ (ಹಳ್ಳಿಮನೆ), ಬಾವಿಕಟ್ಟೆ, ಹರಟೆಕಟ್ಟೆ ಪಾರಂಪರಿಕ ಊಟದ ಮನೆ ನಿರ್ಮಿಸಲಾಗಿದೆ. ಹಳೆಯ ಕಾಲದ ಅಡುಗೆ ಪರಿಕರಗಳನ್ನೂ ಕಲೆ ಹಾಕಲಾಗಿದೆ. ಜನಪದ ಅಣಕು ಮದುವೆ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.
ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿನಿಯರು ರೊಟ್ಟಿ, ಪಲ್ಯ, ಚಟ್ಟಿಪುಡಿ, ಬುತ್ತಿ ಇತ್ಯಾದಿ ಅಡುಗೆಯನ್ನು ಮನೆಯಿಂದಲೇ ತಯಾರಿಸಿಕೊಂಡು ಬಂದು ಒಟ್ಟಿಗೇ ಕುಳಿತು ಸವಿಯುತ್ತೇವೆ. ಉತ್ಸವದ ನಿಮಿತ್ತ ಕಿರಾಣಿ ಅಂಗಡಿ ಸ್ಥಾಪಿಸಿದ್ದು, ಅಲ್ಲಿ ಅಡುಗೆ ಮನೆಗೆ ಅಗತ್ಯ ಸಾಮಗ್ರಿಗಳು, ಮಂಡಕ್ಕಿ ಉಂಡೆ ಮತ್ತಿತರ ತಿನಿಸುಗಳನ್ನು ಇಡಲಾಗುವುದು. ಮನೆಗೆ ಬರುವ ಅತಿಥಿಗಳಿಗೆ ಒಂದು ಕಾಲದಲ್ಲಿ ಕಾಲು ತೊಳೆಯಲು ನೀರು ಕೊಟ್ಟು ಸತ್ಕರಿಸುತ್ತಿದ್ದ ಗ್ರಾಮೀಣರ ಬಗೆಯನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಲಿದ್ದಾರೆ. ಆರಂಭದಲ್ಲಿ ಅಭ್ಯಾಸ ಕಷ್ಟ ಎನ್ನುತ್ತಿದ್ದ ವಿದ್ಯಾರ್ಥಿನಿಯರು ನಂತರದಲ್ಲಿ ಮೈ ಕೊಡವಿಕೊಂಡು ಎದ್ದಿದ್ದು, ಉತ್ಸವ ಯಶಸ್ವಿಗೊಳಿಸುವ ಹುಮ್ಮಸ್ಸಿನಲ್ಲಿದ್ದಾರೆ ಎಂಬುದು ಪ್ರಾಚಾರ್ಯ ಎಂ.ಮಂಜಣ್ಣ ಅಭಿಪ್ರಾಯ.

ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳು ಮಕ್ಕಳನ್ನು ನಮ್ಮ ಗ್ರಾಮೀಣ ಪರಂಪರೆಯಿಂದ ದೂರ ಸರಿಸಿವೆ. ಸಮಾಜವು ಸಾಂಸ್ಕೃತಿಕ ಪರಂಪರೆಯಿಂದ ಬೇರ್ಪಟ್ಟರೆ ಮುಂದೆ ಅನಾಥಪ್ರಜ್ಞೆ ಮೂಡಲಿದೆ. ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಮೂಲಕ ಜಾನಪದ ಪರಂಪರೆಯನ್ನು ಉಳಿಸಿ, ಬೆಳೆಸಲು ಇಂತಹ ಉತ್ಸವಗಳು ಸದಾ ನಡೆಯುತ್ತಿರುಬೇಕು’ ಎನ್ನುತ್ತಾರೆ ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಮಲ್ಲಿಕಾರ್ಜುನಗೌಡ ತೂಲಹಳ್ಳಿ.
ಜಾನಪದ ಉತ್ಸವ ಇಂದು ತೋರಣೆಗಟ್ಟೆ ಗ್ರಾಮದ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದೆ ಕಾಟಮ್ಮ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕೆ.ಎಸ್. ಈಶ್ವರಪ್ಪ ಮುಖ್ಯತಿಥಿಯಾಗಿ ಪಾಲ್ಗೊಂಡಿದ್ದ್ರು. ಪ್ರಾಂಶುಪಾಲ ಎಂ.ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಚಾಲಕ ಎಂ.ಪಿ. ಭೀಮಪ್ಪ ಅಧೀಕ್ಷಕ ಟಿ.ಶೇಷಪ್ಪ ಕೆಜಿಸಿಟಿಎ ವಲಯ ಕಾರ್ಯದರ್ಶಿ ಟಿ.ಕರಿಬಸಪ್ಪ ಸಾಂಸ್ಕೃತಿಕ ಸಮಿತಿ ಸಂಚಾಲಕ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಸಿಡಿಸಿ ಸದಸ್ಯರು ಹಾಗೂ ಕಾಲೇಜು ಸಿಬ್ಬಂದಿ ಉಪಸ್ಥಿತರಿರುವರು.