
ಹಾವೇರಿ : ಜಿಲ್ಲೆಯ ಹಾನಗಲ್ ಪಟ್ಟಣದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಟೋಲ್ ಗೇಟ್ನಲ್ಲಿ ದಿನಕ್ಕೆ ಕನಿಷ್ಠ ₹ 60 ಸಾವಿರ ಸಂಗ್ರಹಿಸಲು ರಾಜ್ಯ ಸರ್ಕಾರ ಗುರಿ ನಿಗದಿಪಡಿಸಿದೆ. 2018ರಲ್ಲಿ ನಿರ್ಮಿಸಿದ್ದ ರಾಜ್ಯ ಹೆದ್ದಾರಿಗೆ 2025ರಲ್ಲಿ ಟೋಲ್ ವಸೂಲಿ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಜನರ ಧ್ವನಿಗೆ ಸ್ಪಂದಿಸಬೇಕಾದ ಸರ್ಕಾರ ಟೋಲ್ ವಿಷಯದಲ್ಲಿ ಮೌನ ವಹಿಸಿದೆ. ಶಿವಮೊಗ್ಗದಿಂದ ಹಾವೇರಿ ಜಿಲ್ಲೆಯ ಗಡಿಭಾಗದ ತಡಸ ಗ್ರಾಮದವರೆಗೂ 184 ಕಿ.ಮೀ. ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ನಿರ್ಮಿಸಲಾಗಿದೆ. ಈ ಪೈಕಿ 43.46 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹ ಮಾಡಲು ಹಾನಗಲ್ ಬಳಿಯ ಕರಗುದರಿ ಸಮೀಪದಲ್ಲಿ ನೂತನ ಟೋಲ್ಗೇಟ್ ನಿರ್ಮಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಹಾಗೂ ಕೆಶಿಫ್ನಿಂದ ನಿರ್ಮಿಸಿರುವ ರಾಜ್ಯ ಹೆದ್ದಾರಿಯಲ್ಲಿ ಟೋಲ್ಗೇಟ್ ನಿರ್ಮಿಸಿ ಟೋಲ್ ವಸೂಲಿ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತಕ್ಕೆ (ಕೆ.ಆರ್.ಡಿ.ಸಿ.ಎಲ್) ವಹಿಸಲಾಗಿದೆ. ಇದೀಗ ಕೆಆರ್ಡಿಸಿಎಲ್ ಅಧಿಕಾರಿಗಳು, ದಾವಣಗೆರೆಯ ಜ್ಯೋತಿಪ್ರಕಾಶ್ ಕೆ.ಎಂ. ಅವರಿಗೆ ಟೆಂಡರ್ ನೀಡಿದ್ದಾರೆ. ಅದರ ಅನ್ವಯ ಟೋಲ್ಗೇಟ್ ನಿರ್ಮಾಣವೂ ನಡೆಯುತ್ತಿದ್ದು, ಸದ್ಯದಲ್ಲೇ ಟೋಲ್ಗೇಟ್ ಶುರುವಾಗುವ ಮುನ್ಸೂಚನೆಯೂ ಸಿಕ್ಕಿದೆ.

ಟೆಂಡರ್ ನಿಯಮ ಉಲ್ಲಂಘಿಸಿ ಟೋಲ್ಗೇಟ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಈ ಸಂಬಂಧ ಕೆಆರ್ಡಿಸಿಎಲ್ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನರ ನಡುವೆ ಒಂದು ಸುತ್ತಿನ ಸಭೆ ಸಹ ನಡೆದಿದೆ. ಸಭೆಯ ನಂತರವೂ ಟೋಲ್ಗೇಟ್ ನಿರ್ಮಾಣ ಕೆಲಸ ಮುಂದುವರಿದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ₹ 1 ಲಕ್ಷ ಟೋಲ್ ಸಂಗ್ರಹಿಸಬಹುದೆಂದು ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಆದರೆ, ವಾಹನಗಳ ದಟ್ಟಣೆ ಕಡಿಮೆ ಇರುವ ಕಾರಣಕ್ಕೆ ಟೋಲ್ ಸಂಗ್ರಹ ಮಾಡಲು ಗುತ್ತಿಗೆದಾರರು ಹಿಂದೇಟು ಹಾಕಿದ್ದರು. ಟೆಂಡರ್ಗೆ ಇಎಂಡಿ ಹಣವನ್ನು ಕಟ್ಟಿ, ಅದನ್ನು ವಾಪಸು ಪಡೆಯದೇ ಟೆಂಡರ್ ರದ್ದುಪಡಿಸಿಕೊಂಡಿದ್ದರು. ಈಗ ದಿನಕ್ಕೆ ₹ 60 ಸಾವಿರ ಸಂಗ್ರಹ ಮಾಡುವ ಗುರಿ ಇಟ್ಟುಕೊಂಡಿರುವ ಕೆಆರ್ಡಿಸಿಎಲ್, ಬೇರೆ ಕಡೆ ಟೋಲ್ಗೇಟ್ ನಿರ್ವಹಣೆ ಮಾಡುತ್ತಿರುವ ಜ್ಯೋತಿಪ್ರಕಾಶ್ ಕೆ.ಎಂ. ಅವರಿಗೆ ಹಾನಗಲ್ ಟೋಲ್ಗೇಟ್ ಜವಾಬ್ದಾರಿ ವಹಿಸಿದ್ದಾರೆ. 2018ರಲ್ಲಿ ಹೆದ್ದಾರಿ ನಿರ್ಮಾಣ ಮಾಡಿದ್ದ ಸಂದರ್ಭದಲ್ಲಿ ವಾಹನಗಳ ದಟ್ಟಣೆ ಕಡಿಮೆಯಿತ್ತು. ಈಗ ದಟ್ಟಣೆ ಹೆಚ್ಚಾಗಿದೆ. ಹಾನಗಲ್ ಮೂಲಕ ತಡಸ ಹಾಗೂ ಹುಬ್ಬಳ್ಳಿಗೆ ಹೋಗುವ ವಾಹನಗಳ ಸಂಖ್ಯೆ ಹೆಚ್ಚಿದೆ. ಇದೇ ಲೆಕ್ಕಾಚಾರದಲ್ಲಿ ದಿನಕ್ಕೆ ಕನಿಷ್ಠ 60 ಸಾವಿರದಿಂದ ಗರಿಷ್ಠ ₹ 1 ಲಕ್ಷದವರೆಗೆ ಸಂಗ್ರಹ ಮಾಡುವ ಗುರಿ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ದಿನವೊಂದಕ್ಕೆ ಗುತ್ತಿಗೆದಾರರು, ಗರಿಷ್ಠ 50 ಸಾವಿರದಿಂದ ₹ 55 ಸಾವಿರ ನೀಡಬೇಕೆಂದು ಕೆ.ಆರ್.ಡಿ.ಸಿ.ಎಲ್ ಷರತ್ತು ವಿಧಿಸಿದೆ. ಅದಕ್ಕಿಂತ ಹೆಚ್ಚುವರಿ ಹಣ ಬಂದರೆ ಮಾತ್ರ ಗುತ್ತಿಗೆದಾರರ ಲಾಭವಾಗಲಿದೆ. ಹಣ ಕಡಿಮೆಯಾದರೆ, ಮುಂಬರುವ ದಿನಗಳಲ್ಲಿ ಗುತ್ತಿಗೆದಾರರು ಸಹ ಟೋಲ್ಗೇಟ್ ನಿರ್ವಹಣೆಯನ್ನು ಅರ್ಧಕ್ಕೆ ಕೈ ಬಿಡುವ ಸಂಭವವೂ ಇದೆ’ ಎಂದು ತಿಳಿಸಿದರು. ಟೋಲ್ಗೇಟ್ ನಿರ್ಮಾಣವಾದರೆ, ಕರಗುದರಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರ ಜೇಬಿಗೆ ಕತ್ತರಿ ಬೀಳಲಿದೆ. ಸ್ಥಳೀಯರಿಗೆ ರಿಯಾಯಿತಿ ನೀಡಿದರೆ ಮಾತ್ರ. ಟೋಲ್ಗೇಟ್ ಆರಂಭಿಸಲು ಅವಕಾಶ ನೀಡುತ್ತೇವೆ. ಇಲ್ಲದಿದ್ದರೆ, ಹೋರಾಟ ಆರಂಭಿಸುತ್ತೇವೆ ಎಂದು ಸ್ಥಳೀಯರು ಎಚ್ಚರಿಸಿದರು. ಶಿವಮೊಗ್ಗ ತಡಸ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಮಾಡಿರುವ ಸಾಲ ಮರುಪಾವತಿ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹೀಗಾಗಿ ಟೋಲ್ಗೇಟ್ ನಿರ್ಮಾಣ ಮಾಡಬೇಕೆಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ’ ಎಂದು ಕೆಅರ್ಡಿಸಿಎಲ್ ಅಧಿಕಾರಿಯೊಬ್ಬರು ಹೇಳಿದರು. ರಾಜ್ಯ ಹೆದ್ದಾರಿಯಲ್ಲಿ 1 ಮೀಟರ್ ಸಂಚರಿಸಿದರೂ ಜನರು ಹಣ ಪಾವತಿಸುವುದು ಕಡ್ಡಾಯ. ಶಿವಮೊಗ್ಗದಿಂದ ಶಿಕಾರಿಪುರ ಹಾಗೂ ಶಿಕಾರಿಪುರದಿಂದ ಹಾನಗಲ್ ಗಡಿಭಾಗದ ಗೊಂದಿವರೆಗೂ ಎರಡು ಪ್ರತ್ಯೇಕ ಟೋಲ್ಗೇಟ್ಗಳಿವೆ. ಗೂಂದಿಯಿಂದ ಹಾನಗಲ್ ಮಾರ್ಗವಾಗಿ ತಡಸ ಕ್ರಾಸ್ವರೆಗೆ ಟೋಲ್ ಗೇಟ್ ಇರಲಿಲ್ಲ. ಈ ಮಾರ್ಗದಲ್ಲಿ ಈಗ ಟೋಲ್ಗೇಟ್ ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು. ಟೋಲ್ ಎಂದೊಡನೆ ಸ್ಥಳೀಯರ ವಿರೋಧ ಸಾಮಾನ್ಯ. ಇದು ಸರ್ಕಾರದ ಸೂಚನೆಯಂತೆ ನಿರ್ಮಾಣವಾಗುತ್ತಿರುವ ಟೋಲ್ಗೇಟ್. ಜನರ ಜೊತೆ ಚರ್ಚಿಸಿ ಅವರಿಗೆ ಮನವರಿಕೆ ಮಾಡಿ ಟೋಲ್ಗೇಟ್ ಆರಂಭಿಸಲಾಗುವುದು ಎಂದು ಹೇಳಿದರು.