
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ “ಆಪರೇಷನ್ ಸಿಂಧೂರ” ಕಾರ್ಯಾಚರಣೆ ಬಳಿಕ, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿದೆ. ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸುತ್ತಿರುವ ದಾಳಿ ಪ್ರಯತ್ನಗಳನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸುತ್ತಿವೆ. ಈ ಮಧ್ಯೆ ಅರಬ್ಬೀ ಸಮುದ್ರದಲ್ಲಿ ತನ್ನ ಚಟುವಟಿಕೆಗಳನ್ನು ಚುರುಕುಗೊಳಿಸಿರುವ ಭಾರತೀಯ ನೌಕಾಪಡೆ, ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸಲೆತ್ನಿಸಿದ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ ಎಂದು ನೌಕಾಸೇನೆ ತಿಳಿಸಿದೆ.

j3tvkannada.in
ಪಾಕಿಸ್ತಾನದ ವಿರುದ್ಧ ತಡರಾತ್ರಿ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಸೇನೆ ಅರಬ್ಬೀ ಸಮುದ್ರದಲ್ಲಿ ಕಣ್ಗಾವಲು ಜೊತೆಗೆ ಸಾರ್ವಭೌಮತ್ವ ರಕ್ಷಣೆಗೆ ಸರ್ವ ಸನ್ನದ್ಧವಾಗಿದೆ. ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನ ವಿರುದ್ದ ನಿನ್ನೆ (ಮೇ.8-ಗುರುವಾರ) ತಡರಾತ್ರಿ ಕಾರ್ಯಾಚರಣೆ ನಡೆಸಿದೆಎಂದು ಹೇಳಿದೆ.
ಭಾರತೀಯ ನೌಕಾಪಡೆಯ ಕಾರ್ಯಾಚರಣೆಯನ್ನು ಖಚಿತಪಡಿಸಿರುವ ಭಾರತದ ರಕ್ಷಣಾ ಸಚಿವಾಲಯ, “ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ದಾಳಿಯ ಪ್ರಯತ್ನಗಳಿಗೆ ಪ್ರತಿಕ್ರಿಯೆಯಾಗಿ, ಅರಬ್ಬೀ ಸಮುದ್ರದಿಂದ ನೌಕಾಸೇನೆ ಕಾರ್ಯಾಚರಣೆ ನಡೆಸಿದ ಬಗ್ಗೆ ಸ್ಪಷ್ಟನೆ ನೀಡಿದೆ. ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದ ನೌಕಾಸೇನೆಯ ಚಲನವಲನಗಳ ಮೇಲೆ ನಿಗಾ ಇಡಲಾಗಿದ್ದು, ಸಂಭಾವ್ಯ ದಾಳಿಯನ್ನು ಎದುರಿಸಲು ಸಕಲ ಸಿದ್ಧತೆ ಪೂರ್ಣಗೊಂಡಿದೆ ಎಂದು ಭಾರತೀಯ ನೌಕಾಸೇನೆ ತಿಳಿಸಿದೆ.
ಇನ್ನು ಭಾರತದ ಸಂಪೂರ್ಣ ಸ್ವದೇಶಿ ನಿರ್ಮಿತ ಯುದ್ಧ ಹಡಗು ಐ.ಎನ್.ಎಸ್ ವಿಕ್ರಾಂತ್ ಅನ್ನು ಅರಬ್ಬೀ ಸಮುದ್ರದಲ್ಲಿ ನಿಯೋಜನೆ ಮಾಡಲಾಗಿದೆ. ಈ ಯುದ್ಧ ಹಡಗು ಕರಾಚಿ ಬಂದರಿನ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂಬ ವರದಿಗಳು ಬರುತ್ತಿವೆಯಾದರೂ, ಈ ಕುರಿತು ಭಾರತೀಯ ನೌಕಾಸೇನೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ.
1971ರ ಬಾಂಗ್ಲಾದೇಶ ಯುದ್ಧದ ಸಮಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಭಾರತೀಯ ನೌಕಾಸೇನೆಯ ಅತ್ಯಂತ ಪ್ರತಿಷ್ಠಿತ ಐ.ಎನ್.ಎಸ್ ವಿಕ್ರಾಂತ್ ಸ್ಮರಣಾರ್ಥವಾಗಿ, ಈ ಯುದ್ಧ ಹಡಗಿಗೆ ಅದೇ ಹೆಸರನ್ನು ಇಡಲಾಗಿದೆ. ಪಾಕಿಸ್ತಾನದ ನೆಲ, ಜಲ ಅಥವಾ ವಾಯುದಾಳಿ ಎದುರಿಸಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದ್ದು, ಸೇನೆಯ ಮೂರೂ ವಿಭಾಗಗಳು ಪ್ರತಿದಾಳಿಗೆ ಸಕಲ ಸಿದ್ಧತೆಯನ್ನು ಪೂರ್ಣಗೊಳಿಸಿವೆ. ಭಾರತದ ಈ ಯುದ್ಧ ಸನ್ನದ್ಧತೆಯನ್ನು ನೋಡಿ ಪಾಕಿಸ್ತಾನ ಅಕ್ಷರಶಃ ಬೆಚ್ಚಿ ಬಿದ್ದಿದೆ.
ಭಾರತವು ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ತನ್ನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ.
ಒಟ್ಟಿನಲ್ಲಿ ಭಾರತ-ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಕ್ಷಣಕ್ಷಣಕ್ಕೂ ಉಲ್ಬಣಗೊಳ್ಳುತ್ತಿದ್ದು, ಭಾರತ ತನ್ನ ರಕ್ಷಣೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವಿಚಾರವಾಗಿ ಇಡೀ ಭಾರತ ಒಂದಾಗಿದೆ.