
ಕೋಲಾರ: ಸರ್ವೇ ಸೂಪರ್ವೈಸರ್ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಕೋಲಾರದಲ್ಲಿ ನಡೆದಿದೆ.

j3tvkannada
ಕೋಲಾರದ ಜಿಲ್ಲಾಧಿಕಾರಿ ಕಚೇರಿ ಭೂ ದಾಖಲೆಗಳ ವಿಭಾಗದ ಸರ್ವೇ ಸೂಪರ್ ವೈಸರ್ ಸುರೇಶ್ ಬಾಬುಗೆ ಸೇರಿದ 6 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಬ್ಬರು ಅಣ್ಣಂದಿರ ಮನೆ, ತಮ್ಮನ ಮನೆ, ನಿವೃತ್ತ ಪಿ.ಡಿ.ಓ ಹಾಗೂ ಪಿ.ಡಿ.ಓ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೇ ಅಣ್ಣಂದಿರಾದ ಲಕ್ಷ್ಮೀ ನಾರಾಯಣ, ವಿಜಯ್ ಕುಮಾರ್ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನಿಡುಘಟ್ಟ ಗ್ರಾಮದ ಮನೆಗೆ ಲೊಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರದ ವೈದ್ಯ ಪ್ರಸನ್ನಕುಮಾರ್ ಮನೆ, ಕೋಲಾರ ನಗರದ ನಿವೃತ್ತ ಪಿ.ಡಿ.ಓ ನಾಗರಾಜ್ ಮನೆ ಹಾಗೂ ಸರ್ವೇ ಸೂಪರ್ವೈಸರ್ ಸುರೇಶ್ ಬಾಬು ಮನೆ ಸೇರಿ 6 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಕಳೆದ 6 ತಿಂಗಳ ಹಿಂದೆಯಷ್ಟೆ ಒಂದು ಲೋಕಾಯುಕ್ತ ದಾಳಿ ನಡೆದಿತ್ತು. ಹಣ ಸೇರಿದಂತೆ ಸರ್ಕಾರಿ ಆಸ್ತಿ ಪತ್ರಗಳು, ಹಲವು ದಾಖಲೆಗಳು ಸಿಕ್ಕಿತ್ತು. ಮತ್ತೆ ಹಲವು ದೂರುಗಳು ಬಂದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ದಾವಣಗೆರೆ ನಗರ ನೀರು ಸರಬರಾಜು ಇಲಾಖೆಯ ಸಹಾಯಕ ಇಂಜಿನಿಯರ್ ಬಿ.ರವಿ ಕಚೇರಿ ಹಾಗೂ ಅವರ ತಾಯಿ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆ ಬಕ್ಕೇಶ್ವರ ಶಾಲೆ ಬಳಿ ಇರುವ ಕಚೇರಿ ಹಾಗೂ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಇರುವ ಅವರ ತಾಯಿ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ, ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಡಿ.ವೈ.ಎಸ್ಪಿ ಕಲಾವತಿ ತಂಡದಿಂದ ದಾಳಿ ನಡೆಸಲಾಗಿದೆ. ಅಲ್ಲದೇ ಚಿತ್ರದುರ್ಗದಲ್ಲಿರುವ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗದ ಹಳೇ ಬೆಂಗಳೂರು ರಸ್ತೆಯಲ್ಲಿನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.