
ಚಾಮರಾಜನಗರ: ಮೈಸೂರು – ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ (ಎಂಸಿಡಿಸಿಸಿ) ಆಡಳಿತ ಮಂಡಳಿಗೆ ಜೂ.26ರಂದು ಚುನಾವಣೆ ನಡೆಯಲಿದ್ದು, ಈ ಪೈಕಿ ಜಿಲ್ಲೆಯ ಚಾಮರಾಜನಗರ ಕ್ಷೇತ್ರ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ. ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರೇ ಚಾ.ನಗರ ಸಹಕಾರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರೆ, ಪ್ರತಿ ಸ್ಪರ್ಧಿಯಾಗಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಭೇಂದ್ರಪ್ಪ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಮಾಜಿ ಸಚಿವರೂ ಆದ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಬಿಜೆಪಿ ಅಭ್ಯರ್ಥಿ ವೃಷಭೇಂದ್ರಪ್ಪ ಅವರಿಗೆ ಇದು ಮೊದಲ ಚುನಾವಣೆಯಾಗಿದ್ದು, ಗೆದ್ದರೆ ಇತಿಹಾಸ ನಿರ್ಮಿಸಿದಂತಾಗುತ್ತದೆ.

j3tvkannada.in
ಆದರೆ, ಪುಟ್ಟರಂಗಶೆಟ್ಟಿ ಅವರಿಗೆ ಗೆಲುವಿನಲ್ಲಿ ವ್ಯತ್ಯಾಸವಾದರೆ ಸಾಕಷ್ಟು ಮುಖಭಂಗ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗಾಗಿಯೇ 37 ಮಂದಿ ಮತದಾರರ ಪೈಕಿ ಹಲವರನ್ನು ಸೆಳೆದು, ಅವರನ್ನು ಉತ್ತರ ಭಾರತದೆಡೆಗೆ ಪ್ರವಾಸಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಅವರಿಗೆ ಸಕಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಪ್ರತಿನಿಧಿಗಳನ್ನು ವಿದೇಶಕ್ಕೆ ಕಳುಹಿಸಬೇಕೆಂಬ ಯೋಜನೆ ಇತ್ತು. ಆದರೆ, ಹಲವರಲ್ಲಿ ಪಾಸ್ಪೋರ್ಟ್ ಇಲ್ಲದ ಕಾರಣಕ್ಕೆ ಉತ್ತರ ಭಾರತದೆಡೆಗೆ ಪ್ರವಾಸಕ್ಕೆ ಕಳುಹಿಸಲಾಗಿದೆ ಎಂದು ಜನ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇತ್ತ ಬಿಜೆಪಿಯಿಂದಲೂ ಪ್ರತಿನಿಧಿಗಳನ್ನು ಸೆಳೆಯುವ ನಿಟ್ಟಿನಲ್ಲಿ ತಂತ್ರಗಾರಿಕೆ ನಡೆಯುತ್ತಿದೆಯಾದರೂ ಅವರು ಪ್ರವಾಸದ ಆಮಿಷವೊಡ್ಡಿಲ್ಲ. ಕಾಂಗ್ರೆಸ್ ಶಾಸಕರು ಅನುಸರಿಸುತ್ತಿರುವ ತಂತ್ರಗಾರಿಕೆಯನ್ನು ಗಮನಿಸಿ, ತಾಳ್ಮೆಯಿಂದ ಅದಕ್ಕೆ ಪ್ರತಿಯಾದ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ ಎಂಬುದಾಗಿಯೂ ಹೇಳಲಾಗುತ್ತಿದೆ.
ಶಾಸಕರ ಎದುರು ಸ್ಪರ್ಧೆಗೆ ಇಳಿದಿರುವ ಹಿನ್ನೆಲೆಯಲ್ಲಿ ವೃಷಭೇಂದ್ರಪ್ಪ ಅವರಿಗೆ ಬಿಜೆಪಿಯ ರಾಜ್ಯಾಧ್ಯಕ್ಷರಾದಿಯಾಗಿ ಪಕ್ಷದ ಪ್ರಭಾವಿ ಮುಖಂಡರ ಬೆಂಬಲ ದೊರಕಿದೆ. ಅಲ್ಲದೇ ಡಿ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಜಿ.ಟಿ.ದೇವೇಗೌಡ ಅವರ ಪುತ್ರ ಹರೀಶ್ ಗೌಡ ಅವರು ಸಹ ಪರೋಕ್ಷ ರೀತಿಯಲ್ಲಿ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗುತ್ತಿದೆ.