
ಹಾವೇರಿ: ಗೋವಿನಜೋಳ, ಸೇರಿದಂತೆ ಹಲವು ಆಹಾರ ಧಾನ್ಯಗಳಿಗೆ ಹೆಸರಾಗಿರುವ ಹಾವೇರಿ ಜಿಲ್ಲೆ, ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ಬೆಳೆಗಳತ್ತ ವಾಲುತ್ತಿದೆ. ಜಿಲ್ಲೆಯ ಹಲವು ರೈತರು, ತಮ್ಮ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಅದರಲ್ಲೂ ಅಡಿಕೆ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ತೋಟಗಾರಿಕೆ ಬೆಳೆಗಳ ಪ್ರದೇಶಗಳ ಪೈಕಿ ಅಡಿಕೆ ಬೆಳೆ ಅಗ್ರಸ್ಥಾನ ಪಡೆದುಕೊಂಡಿದೆ.

j3tvkannada
ಬಯಲು ಸೀಮೆಯ ಮೈದಾನ ಹಾಗೂ ಅರೇ ಮಲೆನಾಡು ಪ್ರದೇಶ ಹೊಂದಿರುವ ಹಾವೇರಿ ಜಿಲ್ಲೆಯ ವಾತಾವರಣ, ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೊತೆ ಗಡಿ ಹಂಚಿಕೊಂಡಿರುವ ತಾಲ್ಲೂಕುಗಳು ಹಾವೇರಿ ಜಿಲ್ಲೆಯಲ್ಲಿವೆ. ಇದರ ಪರಿಣಾಮವಾಗಿ ರೈತರು, ಅಡಿಕೆ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ.
ಮಾವು, ಪೇರಲ, ಬಾಳೆ, ಚಿಕ್ಕು, ಕಲ್ಲಂಗಡಿ, ತೆಂಗು, ಎಲೆಬಳ್ಳಿ, ಟೊಮೆಟೊ, ಮೆಣಸಿನಕಾಯಿ, ಉಳ್ಳಾಗಡ್ಡಿ, ಬಳ್ಳುಳ್ಳಿ, ಬದನೆಕಾಯಿ, ಶುಂಠಿ, ಸೌತೆ, ಹಿರೇಕಾಯಿ, ಹಾಗಲ, ಕುಂಬಳಕಾಯಿ, ಎಲೆಕೋಸು , ಬೆಂಡಿ ಕಾಯಿ ಹಾಗೂ ಇತರೆ ಬೆಳೆಗಳಿಗಿಂತಲೂ ಜಿಲ್ಲೆಯಲ್ಲಿ ಅಡಿಕೆ ಬೆಳೆಯ ಪ್ರದೇಶ ಅಧಿಕವಾಗಿದೆ.
ಜಿಲ್ಲೆಯ 18,223.81 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಿದೆ. ಉಳಿದ ಬೆಳೆಗೆ ಹೋಲಿಸಿದರೆ, ಜಿಲ್ಲೆಯಲ್ಲಿ ಅಡಿಕೆ ಪ್ರದೇಶ ಹೆಚ್ಚಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಳವೂ ಆಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಹಲವು ರೈತರು ಮಾವು ಹಾಗೂ ಮೆಣಸಿನಕಾಯಿ ಬೆಳೆಯುತ್ತಿದ್ದರು. ಈಗ ಕ್ರಮೇಣ ಮಾವು-ಮೆಣಸಿನಕಾಯಿ ಬೆಳೆಯಿಂದ ವಿಮುಕ್ತರಾಗುತ್ತಿದ್ದಾರೆ. ಪ್ರಸಕ್ತ ವರ್ಷ 5,033.04 ಹೆಕ್ಟೇರ್ ಪ್ರದೇಶದಲ್ಲಿ ಮಾವು ಹಾಗೂ 4,331.70 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಮುಂದಿನ ವರ್ಷ ಈ ಪ್ರಮಾಣ ಕಡಿಮೆಯಾಗಬಹುದು. ಶುಂಠಿ ಪ್ರದೇಶವೂ 2,748.01 ಹೆಕ್ಟೇರ್ನಷ್ಟಿದ್ದು, ವರ್ಷದಿಂದ ವರ್ಷಕ್ಕೆ ಸ್ವಲ್ಪ ಏರಿಕೆಯಾಗುತ್ತಿದೆ ಎಂದರು.
ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಬೇಡಿಕೆಯೂ ಹೆಚ್ಚಿದೆ. ಕಾಗಿನೆಲೆ ಹಾಗೂ ನರೇಗಲ್ನ ವ್ಯಾಪಾರಿಗಳು, ಸ್ಥಳೀಯವಾಗಿಯೇ ಅಡಿಕೆ ಖರೀದಿಸುತ್ತಿದ್ದಾರೆ. ಹೀಗಾಗಿ, ರೈತರು ಜಮೀನಿನಲ್ಲಿದ್ದ ಬೇರೆ ಬೆಳೆಗಳನ್ನು ತೆಗೆದು ಅಡಿಕೆ ಸಸಿ ಬೆಳೆಸುತ್ತಿದ್ದಾರೆ. ಮುಂಬರುವ 10 ವರ್ಷಗಳವರೆಗೆ ಅಡಿಕೆಗೆ ಉತ್ತಮ ಬೆಲೆ ಇರುವುದಾಗಿ ಅಂದಾಜಿಸಲಾಗಿದೆ ಎಂದು ಹೇಳಿದರು.