
ಚಿಕ್ಕಬಳ್ಳಾಪುರ: ಐತಿಹಾಸಿಕ ಮತ್ತು ರಾಜ್ಯದಲ್ಲಿಯೇ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ತಾಲ್ಲೂಕಿನ ನಂದಿಗಿರಿಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಗಿರಿಧಾಮದಲ್ಲಿ ವಾಸ್ತವ್ಯ ಹೂಡುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ಇದೆ. ಗಿರಿಧಾಮದಲ್ಲಿ ವಾಸ್ತವ್ಯ ಹೂಡುವ ಅತಿಥಿಗಳ ಆತಿಥ್ಯವನ್ನು ಭಿನ್ನವಾಗಿಸುವ ಉದ್ದೇಶವನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆ.ಎಸ್.ಟಿ.ಡಿ.ಸಿ) ಹೊಂದಿದೆ. ಈ ಹಿನ್ನೆಲೆಯಲ್ಲಿ ಗಿರಿಧಾಮದಲ್ಲಿ ಹಮ್ಮಿಕೊಂಡಿರುವ ಮಯೂರ ಹೋಟೆಲ್ ಘಟಕಗಳ ಸಪ್ತಾಹಕ್ಕೆ ಬುಧವಾರ (ಮೇ 7) ತೆರೆ ಬೀಳಲಿದೆ. ಈ ಸಪ್ತಾಹವು ಭಿನ್ನವಾಗಿ ನಡೆದಿದ್ದು ಪ್ರವಾಸಿಗರ ಮನದಲ್ಲಿ ಅಚ್ಚೊತ್ತಿದೆ.

j3tvkannada
ರಾಜ್ಯ, ದೇಶದ ನಾನಾ ಭಾಗಗಳ ಜನರಷ್ಟೇ ಅಲ್ಲ ವಿದೇಶಿ ಪ್ರವಾಸಿಗರನ್ನೂ ನಂದಿಗಿರಿಧಾಮ ಸೆಳೆಯುತ್ತಿದೆ. ಸಾಮಾನ್ಯವಾಗಿ ಖಾಸಗಿ ಐಶಾರಾಮಿ ಹೋಟೆಲ್ಗಳಲ್ಲಿ ವಾಸ್ತವ್ಯಕ್ಕೆ ಬರುವ ಅತಿಥಿಗಳನ್ನು ಅಲ್ಲಿನ ಸಿಬ್ಬಂದಿ ಸ್ವಾಗತಿಸುವರು. ಕೆಲವು ಹೋಟೆಲ್ಗಳಲ್ಲಿ ವಾಸ್ತವ್ಯಕ್ಕೆ ಬರುವವರಿಗೆ ಹಾರ ಹಾಕಿ ಬರಮಾಡಿಕೊಳ್ಳುವರು. ತಿಲಕವಿಟ್ಟು ಆರತಿ ಬೆಳಗುವರು.ಇದೇ ಹಾದಿಯಲ್ಲಿಯೇ ನಂದಿ ಗಿರಿಧಾಮದಲ್ಲಿ ಮಯೂರ ಹೋಟೆಲ್ ಘಟಕಗಳ ಸಪ್ತಾಹ ನಡೆಯುತ್ತಿದೆ. ಗಿರಿಧಾಮದಲ್ಲಿ ಒಟ್ಟು 34 ಕೊಠಡಿಗಳು ಇವೆ. ಇಲ್ಲಿ ವಾಸ್ತವ್ಯಕ್ಕೆ ಪ್ರವಾಸಿಗರು ಬಂದಾಗ ಅವರಿಗೆ ಹಾರ ಹಾಕಿ ಸ್ವಾಗತ ಕೋರಲಾಗುತ್ತದೆ. ಆರತಿ ಮಾಡಿ ತಿಲಕ ಇಡಲಾಗುತ್ತದೆ.
ನಂತರ ರಾತ್ರಿ ಕ್ಯಾಂಡಲ್ ಲೈಟ್ ಡಿನ್ನರ್, ಕ್ಯಾಂಪ್ ಫೈರ್, ಟ್ರಕ್ಕಿಂಗ್, ಬಾಳೆ ಎಲೆ ಊಟ, ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು, ಯೋಗಾಭ್ಯಾಸ ಮಾಡಿಸುವುದು ಸಪ್ತಾಹದ ಭಾಗವಾಗಿವೆ. ಈ ಎಲ್ಲವೂ ಸಪ್ತಾಹದ ದಿನಗಳಲ್ಲಿ ನಡೆಯುತ್ತಿವೆ. ಯಾವ ಅವಧಿಯಲ್ಲಿ ಯಾವ ಕಾರ್ಯಕ್ರಮ ನಡೆಯುತ್ತದೆ ಎನ್ನುವ ಮಾಹಿತಿಯನ್ನು ನಿಗಮದ ಸಿಬ್ಬಂದಿ ಅತಿಥಿಗಳಿಗೆ ಆರಂಭದಲ್ಲಿಯೇ ನೀಡುತ್ತಾರೆ. ಸಾಂಪ್ರದಾಯಿಕ ಸ್ವಾಗತ, ದೇಸಿ ಆಟಗಳ ಪರಿಚಯ, ಐಶಾರಾಮಿ ಹೋಟೆಲ್ಗಳಲ್ಲಿ ದೊರೆಯುವ ಸೌಲಭ್ಯಗಳು ಸಹ ಸಪ್ತಾಹದಲ್ಲಿ ದೊರೆಯುತ್ತಿವೆ.

j3tvkannada
ಅತಿಥಿಗಳು ಈ ಸಪ್ತಾಹದ ಚಟುವಟಿಕೆಗಳನ್ನು ಮನಸಾರೆ ಮೆಚ್ಚುತ್ತಿದ್ದಾರೆ. ಸಪ್ತಾಹಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ ಪುಸ್ತಕದಲ್ಲಿ ಮನಸಾರೆ ಹೊಗಳಿಕೆಯ ಬರಹಗಳಿವೆ. ರಾಜ್ಯದಾದ್ಯಂತ ಮಯೂರ ಹೋಟೆಲ್ ಘಟಕಗಳ ಸಪ್ತಾಹ ಆಚರಿಸಲು ನಿರ್ಧರಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರ ಮುತುವರ್ಜಿಯಿಂದ ನಂದಿಗಿರಿಧಾಮಕ್ಕೆ ಮೊದಲ ಅವಕಾಶ ದೊರೆತಿದೆ ಎಂದು ಗಿರಿಧಾಮದ ನಿಗಮದ ಸಿಬ್ಬಂದಿ ತಿಳಿಸಿದ್ದಾರೆ. ಭಿನ್ನ ಮತ್ತು ವಿಭಿನ್ನವಾಗಿ ಸಪ್ತಾಹ ಆಚರಿಸುತ್ತಿದ್ದೇವೆ. ಅತಿಥಿಗಳಿಂದ ಉತ್ತಮ ಪ್ರತಿಕ್ರಿಯೆ ಸಹ ದೊರೆಯುತ್ತಿದೆ. ವಾರಾಂತ್ಯದಲ್ಲಿ 62 ರಿಂದ 70 ಅತಿಥಿಗಳು ವಾಸ್ತವ್ಯ ಹೂಡಿದ್ದಾರೆ. ಈ ಒಂದು ವಾರದಲ್ಲಿ 200 ಕ್ಕಿಂತ ಹೆಚ್ಚು ಅತಿಥಿಗಳು ನಮ್ಮ ಆತಿಥ್ಯ ಸ್ವೀಕರಿಸಿದ್ದಾರೆ ಎಂದರು.
ಸಪ್ತಾಹ ಪೂರ್ಣವಾದ ತರುವಾಯ ಕ್ಯಾಂಡಲ್ ಲೈಟ್ ಡಿನ್ನರ್, ಕ್ಯಾಂಪ್ ಪೈರ್ ಮುಂದುವರಿಸುತ್ತೇವೆ. ಯೋಗ ಕಾರ್ಯಕ್ರಮದಲ್ಲಿ ಹೆಚ್ಚು ಮಂದಿ ಭಾಗಿಯಾಗಿದ್ದರು. ಮಂಗಳವಾರ ಬೆಳಿಗ್ಗೆ ಅತಿಥಿಗಳನ್ನು ಬೋಗ ನಂದೀಶ್ವರ ದೇಗುಲಕ್ಕೆ ಕರೆದುಕೊಂಡು ಹೋಗುತ್ತೇವೆ. ನಂತರ ಸುಲ್ತಾನಪೇಟೆಯ ಮೆಟ್ಟಿಲುಗಳ ಮಾರ್ಗದಲ್ಲಿ ಗಿರಿಧಾಮಕ್ಕೆ ಟ್ರಕ್ಕಿಂಗ್ ಮಾಡಿಸಲಾಗುವುದು ಎಂದರು. ಈಗಾಗಲೇ ಪ್ರವಾಸಿಗರು ಗಿರಿಧಾಮದಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡುವ ಮತ್ತು ದೇಸಿ ಆಟಗಳನ್ನು ಪರಿಚಯಿಸುವ ಕೆ.ಎಸ್.ಟಿ.ಡಿ.ಸಿ ದೇಸಿ ಆಟಗಳನ್ನು ಗಿರಿಧಾಮದಲ್ಲಿ ಆಡಿಸುತ್ತಿದ್ದಾರೆ. ಈ ಆಟಗಳೂ ಅಷ್ಟೇ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತಿವೆ.
ಚಿಕ್ಕಮಕ್ಕಳು, ಪ್ರೌಢರು, ವೃದ್ಧರು ಹೀಗೆ ಎಲ್ಲರೂ ದೇಸಿ ಆಟಗಳಿಗೆ ಮನಸೋತು, ಗಿರಿಧಾಮದ ಪ್ರಕೃತಿ ಆಹ್ಲಾದಿಸುವ ಜೊತೆಗೆ ಆಟಗಳಲ್ಲಿಯೂ ತೊಡಗುತ್ತಿದ್ದಾರೆ. ಹೀಗೆ ಗಿರಿಧಾಮಕ್ಕೆ ಬರುವ ಪ್ರವಾಸಿಗರನ್ನು ಹೆಚ್ಚು ಸೆಳೆಯಲು ಮತ್ತು ಅವರು ಗಿರಿಧಾಮದಲ್ಲಿ ಹೆಚ್ಚು ಕಾಲ ಕಳೆಯುವಂತೆ ಮಾಡಲು ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಂದಿಬೆಟ್ಟದಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಬೇಕು ಎನ್ನುವುದು ಬಹಳಷ್ಟು ಮಂದಿಯ ಆಸೆ ಆಗಿರುತ್ತದೆ. ಅತಿಥಿಗಳು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ವಾರ ನಮ್ಮ ಸ್ನೇಹಿತರ ವಿವಾಹವಿದೆ. ಅವರಿಗೂ ಕ್ಯಾಂಡಲ್ ಲೈಟ್ ಡಿನ್ನರ್ ವ್ಯವಸ್ಥೆ ಮಾಡಿ ಕೊಡುವಿರಾ ಎಂದು ಕೇಳಿದ್ದಾರೆ. ಒಪ್ಪಿಗೆ ನೀಡಿದ್ದೇವೆ ಎಂದು ನಿಗಮದ ಸಿಬ್ಬಂದಿ ತಿಳಿಸುವರು.