
ಮಂಡ್ಯ: ತಾಲ್ಲೂಕಿನ ಕೆರಗೋಡು ಹೋಬಳಿಯ ಅಲಕೆರೆ ಗ್ರಾಮದಲ್ಲಿ ಬರೋಬ್ಬರಿ 24 ವರ್ಷಗಳ ನಂತರ ವೀರಭದ್ರಸ್ವಾಮಿ ಜಾತ್ರೆ ಮೇ 5ರಿಂದ ನಡೆಯಲಿದ್ದು, ಸಂಭ್ರಮ ಮನೆ ಮಾಡಿದೆ.

j3tvkannada
ಇತಿಹಾಸ ಪ್ರಸಿದ್ಧ ಆರಾಧ್ಯ ದೈವ ವೀರಭದ್ರೇಶ್ವರಸ್ವಾಮಿ ಅಗ್ನಿಕೊಂಡ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಶಿರಾಶಿ ಮರದ ದಿಮ್ಮಿ ಹಾಗೂ ಸೌದೆಗಳ ಗೋಪುರವನ್ನೇ ಕೊಂಡಕ್ಕೆ ಸಿದ್ಧಪಡಿಸಲಾಗಿದೆ. ಇದನ್ನು ಕಣ್ಣುಂಬಿಕೊಳ್ಳಲು ಭಕ್ತರು, ಆಸಕ್ತರು ಸುತ್ತಮುತ್ತಲ ಹಾಗೂ ದೂರದ ಊರುಗಳಿಂದಲೂ ಜನರು ಬರುತ್ತಿದ್ದು, ಸಂಭ್ರಮ-ಸಡಗರವನ್ನು ಆಸ್ವಾದಿಸುತ್ತಿದ್ದಾರೆ. ದೇವಾಲಯದ ಆವರಣದಲ್ಲಿ ಕೊಂಡಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಗ್ರಾಮಸ್ಥರು ಈ ‘ದೊಡ್ಡ ಜಾತ್ರೆ’ಗೆಂದು ನೆಂಟರಿಷ್ಟರನ್ನು ಆಹ್ವಾನಿಸಿದ್ದಾರೆ. ಸಿಹಿಯೂಟದ ಈ ಜಾತ್ರೆಗೆ ಅಲ್ಲಿನವರು ನಿಯಮಗಳನ್ನು ಪಾಲಿಸುತ್ತಿದ್ದಾರೆ. ಮನೆಗಳಿಗೆ ಸುಣ್ಣ-ಬಣ್ಣ ಬಳಿದು ಸಡಗರದಿಂದ ಆಚರಿಸುತ್ತಿದ್ದಾರೆ. ಮಾಂಸದ ಅಡುಗೆ ಮಾಡದೇ ದೇವರಿಗೆ ಶ್ರದ್ಧೆ-ಭಕ್ತಿ ಸಮರ್ಪಿಸಿದ್ದಾರೆ. ಆಲಕೆರೆ ಮತ್ತು ಕೀಲಾರ ಗ್ರಾಮಸ್ಥರು ಹಬ್ಬಕ್ಕೆ ಸಕಲ ಸಿದ್ದತೆಯನ್ನು ಐದು ತಿಂಗಳಿಂದ ಮಾಡಿಕೊಂಡಿದ್ದಾರೆ.
ಕಳೆದ ಐದು ತಿಂಗಳಲ್ಲಿ ಕೊಂಡೋತ್ಸವಕ್ಕೆ ಅಣಿಯಾಗುವುದು ಸೇರಿದಂತೆ ದೇವತಾ ಕಾರ್ಯಗಳ ಬಗ್ಗೆ ಎರಡೂ ಗ್ರಾಮಸ್ಥರು ಚರ್ಚೆ ನಡೆಸಿ ನಿರ್ಧರಿಸಿದ್ದಾರೆ. ಕೊಂಡೋತ್ಸವಕ್ಕೆಂದು ಕೀಲಾರ ಗ್ರಾಮದವರು ಮರ ಸಂಗ್ರಹಿಸಿದರೆ, ಆಲಕೆರೆ ಗ್ರಾಮದವರು ಕೊಂಡೋತ್ಸವ ನಡೆಸಿಕೊಡುತ್ತಾರೆ. ಬಂಡಿ ಓಡಿಸುವುದು ಆಲಕೆರೆ ಗ್ರಾಮದವರಾದರೆ, ಎತ್ತುಗಳನ್ನು ಕಟ್ಟುವುದು ಕೀಲಾರ ಗ್ರಾಮದ ಪಾಲಿನದಾಗಿದೆ. ಹೀಗಾಗಿ, ಎರಡೂ ಊರುಗಳಲ್ಲೂ ಸಡಗರ ಕಂಡುಬರುತ್ತಿದೆ.
2001ರಲ್ಲಿ ನಡೆದಿತ್ತು: ಈ ಜಾತ್ರೆ ಹಾಗೂ ಕೊಂಡೋತ್ಸವ 1967, 1982 ಹಾಗೂ 2001ರಲ್ಲಿ ಅದ್ದೂರಿಯಾಗಿ ನಡೆದಿತ್ತು. 24 ವರ್ಷಗಳ ನಂತರ ಜಾತ್ರೆಗೆ ಎರಡೂ ಗ್ರಾಮಗಳಲ್ಲಿ ಸಡಗರ ಮನೆ ಮಾಡಿದೆ. ಹತ್ತು ದಿನಗಳಿಂದ ಕಠಿಣ ಸಂಪ್ರದಾಯ ಅನುಸರಿಸಿದ್ದಾರೆ. ಒಗ್ಗರಣೆ ಹಾಕುವುದು ನಿಷಿದ್ಧ, ಮಾಂಸಾಹಾರ ಸೇವನೆ ಮತ್ತು ಅಡುಗೆ ಮಾಡುವಂತಿಲ್ಲ ಎಂಬ ನಿಯಮ ಪಾಲಿಸಿದ್ದಾರೆ. ಮೆಣಸಿನಕಾಯಿ ಸುಡುವುದು ಹಾಗೂ ಇತರ ಅಡುಗೆ ಮಾಡುವ ಸಂದರ್ಭದಲ್ಲಿ ‘ಕಂಟು’ ಹಾಕುವಂತಿಲ್ಲ ಎಂಬಿತ್ಯಾದಿ ಸಂಪ್ರದಾಯವನ್ನು ಭಕ್ತಿಯಿಂದ ಪಾಲಿಸಲಾಗಿದೆ ಎಂದು ಕೀಲಾರ ಮತ್ತು ಆಲಕೆರೆ ಯಜಮಾನರು ಹೇಳುತ್ತಾರೆ.
ಕೊಂಡೋತ್ಸವಕ್ಕೆಂದು ವೀರಭದ್ರೇಶ್ವರ ದೇವಾಲಯ ವ್ಯಾಪ್ತಿಯ ಆಲಕೆರೆ ಗ್ರಾಮದಲ್ಲಿ ಮಾತ್ರ ಮರದ ಒಂದು ಕೊಂಬೆಯನ್ನು ಕಡಿಯಲಾಗುತ್ತದೆ. ನೀಲಗಿರಿ, ಆಲದಮರ, ಬಸರಿಮರ, ಬುಗರಿಮರ, ಮಾವಿನಮರ, ತೇಗ, ಹಲಸಿನಮರ, ಹೊಂಗೆಮರ, ಸರ್ವೇಮರ ಸೇರಿದಂತೆ ವಿವಿಧ ಜಾತಿಯ ಮರದ ಕೊಂಬೆಗಳನ್ನು ಕಡಿದು ತರಲಾಗಿದೆ. ಮರದ ತುಂಡುಗಳನ್ನು ಸುಮಾರು 72 ಅಡಿ ಉದ್ದ, 15 ಅಡಿ ಅಗಲದಲ್ಲಿ ಹಾಕಿದ್ದರೆ, ಕೊಂಡ ಬೀಳುವ ಸ್ಥಳ ಐದು ಕಾಲು ಅಡಿ ಅಗಲ ಇರುವಂತೆ ಮಾಡಲಾಗುತ್ತಿದೆ. 24 ಅಡಿ ಎತ್ತರದವರೆಗೆ ಸೌದೆ ಜೋಡಿಸಲಾಗಿದೆ. ಇದರ ತಯಾರಿಯನ್ನು ಸತತ ಐದು ದಿನ ನಡೆಸಲಾಗುತ್ತದೆ ಎಂದು ದೇವಾಲಯದ ಅರ್ಚಕರು ಮಾಹಿತಿ ನೀಡಿದರು.
ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಪಿ.ರವಿಕುಮಾರ್ (ಗಣಿಗ) ಕ್ರಮ ವಹಿಸಿದ್ದಾರೆ. ಎರಡೂ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಮುಖಂಡರೊಂದಿಗೆ ಸಭೆ ನಡೆಸಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ಏನೇನು ಕಾರ್ಯಕ್ರಮಗಳು:-
ಮೇ 5 (ಸೋಮವಾರ)ರಿಂದ ಕೊಂಡೋತ್ಸವಕ್ಕೆ ಚಾಲನೆ ದೊರೆಯಲಿದೆ. ಈಗಾಗಲೇ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ನಿರೀಕ್ಷೆ ಇದೆ. ಸೋಮವಾರ ಬೆಳಿಗ್ಗೆ 5ರಿಂದ ಗಂಗಾಪೂಜೆ ಗಣಪತಿ ಹೋಮ ಮಹಾರುದ್ರ ಹೋಮ ಮತ್ತು ಸ್ವಾಮಿಯವರಿಗೆ ಮಹಾರುದ್ರಾಭಿಷೇಕ ಲಕ್ಷ ಬಿಲ್ವಾರ್ಚನೆ ಹೊಸನೀರು ತರುವುದು ಬೂದನೂರಿನ ತಗಡೂರು ಅಂಕನಾಥೇಶ್ವರ ದೇವರನ್ನು ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿವೆ.
ಮಂಗಳವಾರ ಬಾಯಿಬೀಗ ಹೆಜ್ಜೆ ನಮಸ್ಕಾರ ಹಾಕುವುದು ಬಂಡಿ ಉತ್ಸವ ಸಂಜೆ 5.5ಕ್ಕೆ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಗುವುದು. ರಾತ್ರಿ ಸ್ವಾಮಿಯನ್ನು ಕೊಂಡೋತ್ಸವದಲ್ಲಿ ಬಿಜಯ ಮಾಡಿಸಲಾಗುವುದು. 7ರಂದು ಬ್ರಾಹ್ಮ ಮಹೂರ್ತದಲ್ಲಿ ದೇವರ ಗುಡ್ಡರು ಕೊಂಡ ಹಾಯುವರು. ಕೀಲಾರ ಗ್ರಾಮಕ್ಕೆ ತೆರಳುವ ವೀರಭದ್ರೇಶ್ವರಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗುವುದು. ಮೇ 8ರಂದು ವೀರಭದ್ರೇಶ್ವರಸ್ವಾಮಿ ಕೊಂಡೋತ್ಸವದ ಶಾಂತಿಗಾಗಿ ಆಲಕೆರೆ ಗ್ರಾಮದಲ್ಲಿ ಮಹಾಪ್ರಸಾದ(ಪರ) ವಿನಿಯೋಗ ನಡೆಯಲಿದೆ. ನಂತರ ರಾತ್ರಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ಕೊಂಡ ಹಾಯುವವರು ವೀರಗಾಸೆ ಆಲಕೆರೆ ರೇಣುಕಾಸ್ವಾಮಿ ವೀರಭದ್ರೇಶ್ವರಸ್ವಾಮಿಯ ಪೂಜೆ ಹೊತ್ತ ಆಲಕೆರೆ ಕಾಂತೇಶ್ಕುಮಾರ್ ಕೊಂಡ ಹಾಯುತ್ತಾರೆ. ಎರಡು ಲಕ್ಷಕ್ಕೂ ಜಾಸ್ತಿ ಜನರು ಸೇರುವ ನಿರೀಕ್ಷೆ ಇದೆ ಎಂದು ಎರಡೂ ಗ್ರಾಮಗಳ ಯಜಮಾನರು ಹೆಮ್ಮೆಯಿಂದ ಹೇಳುತ್ತಾರೆ.