
ಉಡುಪಿ: ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಶ್ರಮಜೀವಿಗಳಾದ ಪೌರ ಕಾರ್ಮಿಕರಲ್ಲಿ ಹಲವರು ಇಂದಿಗೂ ಖಾಯಂ ಹುದ್ದೆಯ ಕನವರಿಕೆಯಲ್ಲೇ ಇದ್ದಾರೆ. ಹುದ್ದೆಯನ್ನು ಖಾಯಂಗೊಳಿಸಬೇಕೆಂದು ಆಗ್ರಹಿಸಿ ಹಲವು ವರ್ಷಗಳಿಂದ ಪೌರ ಕಾರ್ಮಿಕರು ರಾಜ್ಯದೆಲ್ಲೆಡೆ ಪ್ರತಿಭಟನೆಗಳನ್ನೂ ನಡೆಸಿದ್ದರು. ಪೌರಕಾರ್ಮಿಕರನ್ನು ಹಾಗೂ ಅವರ ಜೊತೆ ಚಾಲಕರನ್ನೂಖಾಯಂಗೊಳಿಸಲಾಗುವುದು ಎಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು.

ಅದರಂತೆ ಮೇ 1ರಂದು ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯ 12,692 ಮಂದಿ ಪೌರಕಾರ್ಮಿಕರಿಗೆ ಮುಖ್ಯಮಂತ್ರಿ ಖಾಯಂ ನೇಮಕಾತಿ ಪತ್ರವನ್ನು ವಿತರಿಸಿದ್ದಾರೆ. ಅದೇ ರೀತಿ ರಾಜ್ಯದಾದ್ಯಂತ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರನ್ನೂ ಖಾಯಂ ಮಾಡಬೇಕೆಂಬ ಆಗ್ರಹಗಳು ಕೇಳಿ ಬಂದಿವೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನಗರಸಭೆ, ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಹೇಳಿದ್ದರು.
ಕೆಲವೆಡೆ ಹುದ್ದೆ ಭರ್ತಿಯಾಗದ ಕಾರಣ ಇರುವ ಪೌರಕಾರ್ಮಿಕರೇ ಹೆಚ್ಚುವರಿ ಕೆಲಸ ಮಾಡುವ ಪರಿಸ್ಥಿತಿಯೂ ಇದೆ. ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲೂ ಹಲವು ಮಂದಿ ಪೌರ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕರ ಜೊತೆಗೆ ಚಾಲಕ, ಲೋಡರ್ಗಳ ಹುದ್ದೆಗಳನ್ನೂ ಕಾಯಂಗೊಳಿಸಬೇಕೆಂಬ ಒತ್ತಾಯವೂ ಜಿಲ್ಲೆಯಲ್ಲಿ ಕೇಳಿ ಬಂದಿದೆ.
ಉಡುಪಿ ನಗರ ಸಭೆಯಲ್ಲಿ 4 ಮಂದಿ ಚಾಲಕರು ಖಾಯಂ ಹುದ್ದೆಯಲ್ಲಿದ್ದರೆ, 36 ಮಂದಿ ಚಾಲಕರು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 5 ಮಂದಿ ಲೋಡರ್ಗಳು ಖಾಯಂ ಹುದ್ದೆಯಲ್ಲಿದ್ದರೆ 13 ಮಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

j3tvkannada
ಕುಂದಾಪುರ ಪುರಸಭೆಯಲ್ಲಿ 12 ಮಂದಿ ಚಾಲಕರು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿ ಖಾಯಂ ಚಾಲಕರಿಲ್ಲ. ಬೈಂದೂರು ಪಟ್ಟಣ ಪಂಚಾಯಿತಿಯಲ್ಲಿ ಮೂವರು ಚಾಲಕರು ಗುತ್ತಿಗೆ ಆಧಾರದಲ್ಲಿ ಹಾಗೂ ನಾಲ್ವರು ಲೋಡರ್ಗಳು ಖಾಯಂ ಹುದ್ದೆಯಲ್ಲಿದ್ದಾರೆ. ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ನಾಲ್ಕು ಮಂದಿ ಚಾಲಕರು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿದರೆ, ಒಬ್ಬರು ಖಾಯಂ ಹುದ್ದೆಯಲ್ಲಿದ್ದಾರೆ. ಲೋಡರ್ಸ್ ಹುದ್ದೆಯಲ್ಲಿ ಮೂವರು ಖಾಯಂ ಹುದ್ದೆಯಲ್ಲಿದ್ದರೆ ಒಂದು ಹುದ್ದೆ ಖಾಲಿ ಇದೆ. ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರನ್ನುಖಾಯಂಗೊಳಿಸಬೇಕು.
ಯಾವುದೇ ಸೌಲಭ್ಯಗಳಿಲ್ಲದೆ ಅವರು ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ಪೌರಕಾರ್ಮಿಕ ಹುದ್ದೆಗಳ ದುರ್ಬಳಕೆಗೂ ಕಡಿವಾಣ ಹಾಕಬೇಕು ಎನ್ನುತ್ತಾರೆ ಉಡುಪಿ ಜಿಲ್ಲಾ ಪೌರಕಾರ್ಮಿಕರ ಸಂಘದ ಗೌರವಾಧ್ಯಕ್ಷ ನಾಗರಾಜ. ‘ಕೆಲವರು ಮೀಸಲಾತಿ ಆಧಾರದಲ್ಲಿ ಪೌರಕಾರ್ಮಿಕ ಹುದ್ದೆಗೆ ನೇಮಕವಾಗುತ್ತಾರೆ. ಆದರೆ, ಅವರು ನಾವು ಮಾಡುವ ಕೆಲಸಕ್ಕೆ ಬರುವುದಿಲ್ಲ. ಬದಲಾಗಿ ಕಚೇರಿ ಕೆಲಸ, ಕರ ವಸೂಲಿ ಮೊದಲಾದ ಕೆಲಸ ಮಾಡುತ್ತಿದ್ದಾರೆ. ಇದರಿಂದ ಇತರ ಪೌರಕಾರ್ಮಿಕರಿಗೆ ಕೆಲಸದ ಒತ್ತಡ ಅಧಿಕವಾಗುತ್ತದೆ’ ಎಂದು ಆರೋಪಿಸುತ್ತಾರೆ ಅವರು.
ಪೌರ ಕಾರ್ಮಿಕರನ್ನು ನೇಮಕಾತಿ ಮಾಡುವಾಗ ಜನಸಂಖ್ಯೆ ಆಧಾರದಲ್ಲಿ ಮಾಡಬಾರದು. ಅಗತ್ಯಕ್ಕೆ ಅನುಸಾರವಾಗಿ ಮಾಡಬೇಕು. ನಗರಗಳಲ್ಲಿ ವಾಸಿಸುವವರು ಬೇರೆ ಕಡೆಯಿಂದ ಬಂದಿರುತ್ತಾರೆ. ಅವರ ಬಳಿ ಇಲ್ಲಿನ ಗುರುತಿನ ಚೀಟಿ ಇರುವುದಿಲ್ಲ. ಈ ಕಾರಣಕ್ಕೆ ಅವರ ಲೆಕ್ಕ ಸಿಗುವುದಿಲ್ಲ. ಅದಕ್ಕಾಗಿ ಜನಸಂಖ್ಯೆ ಆಧಾರದಲ್ಲಿ ನೇಮಕಾತಿ ಮಾಡಬಾರದು’ ಎಂದು ಅವರು ಆಗ್ರಹಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಕೊರಗ ಸಮುದಾಯದವರು ಪೌರಕಾರ್ಮಿಕ ಕೆಲಸಕ್ಕೆ ಬರುತ್ತಾರೆ. ಈಚೆಗೆ ಉತ್ತರ ಕರ್ನಾಟಕದವರೂ ಈ ಕೆಲಸಕ್ಕೆ ಬರುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಸರ್ಕಾರ ನಿಗದಿಪಡಿಸಿದ ಕೆಲಸಗಳನ್ನು ಹೊರತುಪಡಿಸಿ ಇತರೆ ಯಾವುದೇ ಅನ್ಯ ಕೆಲಸಗಳಿಗೆ ನಿಯೋಜಿಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೂ ಇದು ನಮ್ಮ ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ ಎಂದು ನಾಗರಾಜ ಬೇಸರ ವ್ಯಕ್ತಪಡಿಸಿದರು.