
ಚಿಕ್ಕಮಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ದೀಪಾ ನರ್ಸಿಂಗ್ ಹೋಂ ಎದುರಿನ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ಮೂಗು ಮುಚ್ಚಿ ಸಂಚರಿಸುವಂತಾಗಿದೆ.

j3tvkannada
ಬೈಪಾಸ್ ರಸ್ತೆ ಮತ್ತು ಮಾರ್ಕೇಟ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಶಂಕರಪುರದ ಮೂಲಕ ಹಾದು ಹೋಗುವ ರಸ್ತೆಯಲ್ಲಿ ನಿತ್ಯ ಸಾವಿರಾರು ಜನ ಸಂಚಾರಿಸುತ್ತಾರೆ.
ಶಂಕರಪುರ, ಪಟಾಕಿ ಮೈದಾನ ಹಾಗೂ ದಂಟರಮಕ್ಕಿ ರಸ್ತೆ ಬದಿಯಲ್ಲಿ ಎಲ್ಲಿ ನೋಡಿದರೂ ಕಸ, ಹೋಟೇಲ್ ತ್ಯಾಜ್ಯ, ಮದ್ಯದ ಬಾಟಲು, ಪ್ಲಾಸ್ಟಿಕ್ ಬಾಟಲಿ, ಮನೆ ತೆರವು ಮಾಡಿದ ಹಳೆಯ ವಸ್ತುಗಳು ಎಲ್ಲಂದರಲ್ಲಿ ರಾಶಿ ಬಿದ್ದಿವೆ.
ಮನೆ ಬಾಗಿಲಿಗೆ ನಗರಸಭೆ ಕಸದ ವಾಹನ ಬಂದರು ಕೆಲವರು ಕಸ ನೀಡುತ್ತಿಲ್ಲ. ರಾತ್ರಿ ವೇಳೆ ಬೈಕ್, ಕಾರುಗಳಲ್ಲಿ ತಂದು ಕಸ ಬಿಸಾಡುತ್ತಿರುವುದರಿಂದ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಇನ್ನೂ ಕೆಲವರು ಹಗಲಿನ ವೇಳೆಯೇ ಪ್ಲಾಸ್ಟಿಕ್ಗಳಲ್ಲಿ ಕಸ ತುಂಬಿಕೊಂಡು ಬಂದು ರಸ್ತೆ ಬದಿಯಲ್ಲಿ ಬಿಸಾಡುತ್ತಿದ್ದಾರೆ. ಟ್ರ್ಯಾಕ್ಟರ್ಗಳಲ್ಲಿ ಬಂದು ಹಳೆ ಮನೆಯ ವಸ್ತುಗಳ ಹಾಗೂ ಕಟ್ಟಡ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ರಾಶಿ ಸುರಿಯುತ್ತಿದ್ದಾರೆ.
ಪ್ರತಿನಿತ್ಯ ರಸ್ತೆ ಬದಿಯಲ್ಲಿ ಈ ರೀತಿ ಕಸ ಬೀಳುತ್ತಿದ್ದರು ನಗರಸಭೆ ಮಾತ್ರ ಮೌನ ವಹಿಸಿದೆ. ಯಾವುದೇ ಎಚ್ಚರಿಕೆಯ ಫಲಕ ಹಾಕುವುದಾಗಲಿ, ಗಸ್ತು ನಡೆಸುವುದಾಗಲಿ, ದಂಡ ವಿಧಿಸುವುದಾಗಲಿ ಈವರೆಗೆ ಮಾಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.