
ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಹೋರಾಟ ರೈತರ ಸಂಘರ್ಷಕ್ಕೆ ಎಡೆ ಮಾಡಿ ಕೊಟ್ಟಿರುವುದೇ ರಾಜ್ಯ ಸರ್ಕಾರ. ರಾಜ್ಯದಲ್ಲಿ ಇಷ್ಟೆಲ್ಲಾ ರದ್ಧಾಂತವಾಗಿದೆ. ಇನ್ನೂ ಕೂಡ ಡಿ.ಸಿ.ಎಂ ಒಂದೇ ಒಂದು ಉತ್ತರ ನೀಡಿಲ್ಲ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ʼಜನರೊಂದಿಗೆ ಜನತಾದಳʼ ಮೊದಲನೇ ದಿನದ ಪ್ರವಾಸಕ್ಕೂ ಮೊದಲು ಶ್ರೀಕ್ಷೇತ್ರ ಸಿದ್ದಗಂಗಾ ಮಠಕ್ಕೆ ಅವರು ಭೇಟಿ ನೀಡಿ, ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.

j3tvkannada
ಸ್ಥಳೀಯ ರೈತ ಮುಖಂಡರನ್ನು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದಿಲ್ಲ. ಎಲ್ಲರನ್ನು ಕೂರಿಸಿ ಈ ರಾಜ್ಯ ಸರ್ಕಾರ ಚರ್ಚೆ ಮಾಡಿಲ್ಲ. ಈ ರೀತಿಯ ಘಟನೆಗಳು ಕುಮಾರಣ್ಣ ಕಾಲದಲ್ಲಿ ನಡೆದಿದ್ದರೆ ರೈತರು ಜನಪ್ರತಿನಿಧಿಗಳನ್ನು ಕರೆದು ಕೂರಿಸಿ ಅಲ್ಲಿರುವಂತಹ ಸಮಸ್ಯೆಯನ್ನು ಬಗೆ ಹರಿಸಿರೋರು. ರಾಜ್ಯ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುವುದಕ್ಕೆ ರಾಜ್ಯ ಸರ್ಕಾರ ಮನಸ್ಸು ಮಾಡಬೇಕಾಗಿದೆ. ಸರ್ಕಾರ ಇಲ್ಲಿಯವರೆಗೂ ಮನಸ್ಸು ಮಾಡಿಲ್ಲ. ಇಲ್ಲಿವರೆಗೂ ತಡೆ ಹಿಡಿದು ಕುಳಿತುಕೊಂಡಿದ್ದಾರೆ. ಅತಿ ಶೀಘ್ರದಲ್ಲಿ ಜಿ.ಪಂ, ತಾ.ಪಂ, ಬೆಂಗಳೂರು ಪಾಲಿಕೆ ಚುನಾವಣೆ ಆಗಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರ ಕುರಿತು ಮಾತನಾಡಿದ ಅವರು, ನಾನು ಈ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಾರ್ಯಕರ್ತರ ಜತೆಗೂಡಿ ಈ ಪಕ್ಷವನ್ನು ಬೇರು ಮಟ್ಟದಿಂದ ಬೆಳೆಸಲು ಪ್ರವಾಸ ಮಾಡುತ್ತಿದ್ದೇನೆ. ಈ ವಿಚಾರ ಈಗ ಅಪ್ರಸ್ತುತ ಎಂದು ತಿಳಿಸಿದರು.
ಜೆ.ಡಿ.ಎಸ್ ಮುಳುಗೋ ದೋಣಿ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದು ಮಳುಗೋಗಿರುವ ದೋಣಿ? ಸದಾಕಾಲ ಎಚ್.ಡಿ. ದೇವೆಗೌಡರ ಹಾಗೂ ಕುಮಾರಣ್ಣನವರ ನಿರಂತರ ಹೋರಾಟಕ್ಕೆ ಪ್ರತಿಫಲವಾಗಿ ರಾಜ್ಯದ ಜನ ಆಶೀರ್ವಾದ ಮಾಡಿದ್ದಾರೆ. ಅನೇಕ ಚುನಾವಣೆಗಳಲ್ಲಿ ಅದು ಸಾಬೀತಾಗಿದೆ. ನಮ್ಮದು ಪ್ರಾದೇಶಿಕ ಪಕ್ಷ ಆದರೂ ಶೇ 20% ರಷ್ಟು ಓಟ್ ಶೇರ್ ಇಟ್ಟುಕೊಂಡಿದ್ದೇವೆ. ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ 34% ಓಟಿಂಗ್ ಶೇರ್ ನನ್ನ ಜನ ನೀಡಿದ್ದಾರೆ ಎಂದರು. ಚುನಾವಣೆಯಲ್ಲಿ ಗೆಲುವು ಸೋಲು ಸರ್ವೇ ಸಾಮಾನ್ಯ. ಅದನ್ನು ಸಮಚ್ಚಿತ್ತವಾಗಿ ಕೊಂಡೊಯ್ಯುವ ಮನಸ್ಥಿತಿಯನ್ನು ನಾವು ಹೊಂದಿದ್ದೇವೆ. ಕಾರ್ಯಕರ್ತರಿದ್ದಾರೆ, ಅಭ್ಯರ್ಥಿಗಳಲ್ಲಿ ಹುಮ್ಮಸ್ಸಿದೆ. ನಾವೆಲ್ಲಾ ಕೆಲಸ ಮಾಡಿ ಜನರ ಆಶೀರ್ವಾದ ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.