
ವಿಜಯನಗರ: ತಾಲ್ಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

j3tvkannada
ಬೆಳಗಿನ ಜಾವದಿಂದ ದೇವಸ್ಥಾನದಲ್ಲಿ ಅರ್ಚಕರ ಬಳಗವು ವಿವಿಧ ಬಗೆಯ ಪುಷ್ಪಗಳಿಂದ ಸ್ವಾಮಿಯನ್ನು ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೇರವೇರಿಸಿದರು.
ಭಕ್ತರು ಸಾಲಿನಲ್ಲಿ ಸ್ವಾಮಿಯ ದರ್ಶನ ಪಡೆದರು. ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ರಥೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಹೋಮ, ಪೂಜಾ ವಿಧಿ ವಿಧಾನಗಳು ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿತು.
ಪೀಠದ ಪರಂಪರೆಯಂತೆ ಭಾವೈಕ್ಯತೆಯ ಪ್ರತೀಕವಾಗಿ ಪೀಠಾಧೀಶರಾದ ಸಿದ್ದಲಿಂಗಶಿವಾಚಾರ್ಯರು ಭಕ್ತರೊಂದಿಗೆ ಗ್ರಾಮದಲ್ಲಿರುವ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ದರ್ಗಾಕ್ಕೆ ಭೇಟಿ ನೀಡಿದಾಗ ಮುಸ್ಲಿಮರು ಶ್ರೀಗಳನ್ನು ಗೌರವ ಸಮರ್ಪಿಸಿದರು.
ಸಂಜೆಯಾಗುತ್ತಿದ್ದಂತೆ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಸಕಲ ಬಿರುದಾವಳಿಗಳೊಂದಿಗೆ ಪ್ರತಿಷ್ಠಾಪಿಸಿದ ನಂತರ ಪೀಠಾಧೀಶರು ಹಾಗೂ ವಿವಿಧ ಮಠಾಧೀಶರುಗಳ ನೇತೃತ್ವದಲ್ಲಿ ದೇವಸ್ಥಾನದಿಂದ ರಥ ಬೀದಿಯ ಮುಖಾಂತರ ಸಕಲ ಮಂಗಳವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮೂಲಕ ತೇರು ಬಯಲಿಗೆ ಆಗಮಿಸಿತು.

j3tvkannada
ಪಲ್ಲಕ್ಕಿ ಉತ್ಸವವು ರಥವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದಂತೆ ಅರ್ಚಕರು ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ರಥವನ್ನೇರಿ ಸ್ವಾಮಿಯನ್ನು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಿದರು. ಪಟಾಕ್ಷಿ ಸವಾಲಿನಲ್ಲಿ ಕೆರೆಗುಡಿಹಳ್ಳಿ ನಂದೀಶ್ ಅವರು 3,26,101ಗೆ ಸ್ವಾಮಿಯ ಪಟಾಕ್ಷಿಯನ್ನು ತಮ್ಮದಾಗಿಸಿಕೊಂಡರು.
ನಂತರ ಭಕ್ತರು ಮರುಳಸಿದ್ದೇಶ್ವರ ಮಹಾರಾಜಕಿ ಜೈ ಎಂದು ಘೋಷ ಕೂಗುತ್ತ ರಥವನ್ನು ಭಕ್ತಿಯಿಂದ ಎಳೆಯಲು ಪ್ರಾರಂಭಿಸುತ್ತಿದ್ದಂತೆ ಭಕ್ತರು ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆಯುವುದು, ಬಾಳೆಹಣ್ಣು, ಉತ್ತುತ್ತೆ ಮತ್ತು ದವನವನ್ನು ತೂರಿ ಭಕ್ತಿ ಸಮರ್ಪಿಸಿದರು.
ರಥವು ಪಾದಗಟ್ಟೆ ತಲುಪಿ ಗೋ ದೂಳಿ ಸಮಯದಲ್ಲಿ ಮೂಲ ನೆಲೆ ತಲುಪುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾದರು.
ಬೃಹತ್ ಕೈಗಾರಿಕ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಗಳೂರು ಕ್ಷೇತ್ರದ ಶಾಸಕ ದೇವೇಂದ್ರಪ್ಪ, ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮುಂತಾದ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡರು.