
ಕೊಡಗು: ಪೊನ್ನಂಪೇಟೆ ತಾಲ್ಲೂಕಿನ ಮಾಯಾಮುಡಿಯಲ್ಲಿ ಮಾಯದಂತಹ ಲೋಕ ನಿರ್ಮಿಸಿದವರು ಚೆಪ್ಪುಡೀರ ಸುಬ್ಬಯ್ಯ. ಇವರ ಬಳಿ ಬಗೆ ಬಗೆ ತಳಿಯ ಆರ್ಕಿಡ್ ಸಸ್ಯಗಳಿವೆ. ಸ್ವತಃ ಬೆಳೆದು ಸಸಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವುಗಳಲ್ಲಿ ವಿದೇಶಿ ತಳಿಗಳೂ ಇದ್ದು, ಆರ್ಕಿಡ್ ಪ್ರಿಯರಿಗೆ ಇವರ ಸಸ್ಯಾಗಾರ ಅಚ್ಚುಮೆಚ್ಚಿನ ತಾಣವಾಗಿದೆ.

j3tvkannada
ಕೊಡಗಿನಲ್ಲಿ ಸ್ವತಃ ಆರ್ಕಿಡ್ ಗಿಡಗಳನ್ನು ಬೆಳೆದು ಹೂವು ಸಮೇತ ಮಾರಾಟ ಮಾಡುತ್ತಿರುವ ಅತಿ ವಿರಳ ಮಂದಿಯಲ್ಲಿ ಇವರೂ ಒಬ್ಬರು. ಗಿಡಗಳನ್ನು ತರಿಸಿ ಅದನ್ನು ಸ್ಥಳೀಯವಾಗಿ ತಾವೇ ಬೆಳೆಸಿ ಮಾರಾಟ ಮಾಡುತ್ತಿರುವುದು ವಿಶೇಷ. ಡೆಂಡೋಬಿಯಂ, ಅನ್ಸಿಡಿಯಂ, ವ್ಯಾಂಡಾ, ಕೆಟಿಯಾ ಸೇರಿದಂತೆ ಹಲವು ಆರ್ಕಿಡ್ ಪ್ರಬೇಧಗಳು ಇವರ ಬಳಿ ಇವೆ. ಕೇವಲ ಆರ್ಕಿಡ್ ಮಾತ್ರವಲ್ಲ, ಇವರ ಬಳಿ ಆಂಥೋರಿಯಂ ತೆರನಾದ ಒಳಾಂಗಣ ಅಲಂಕಾರಿಕ ಸಸ್ಯಗಳೂ ಇವರ ಬಳಿ ಇವೆ. ಇವರ ಬಳಿ ಕಾಫಿ ಮಂಡಳಿ ನೀಡುವ ಬೀಜಗಳಿಂದ ತಯಾರಿಸಿದ ಕಾಫಿ ಗಿಡಗಳ ನರ್ಸರಿಯೂ ಇದೆ. ವಿಯಟ್ನಾಂ ತಳಿ ಟಿಆರ್- 9 ಮತ್ತು 11, ಸೆಲೆಕ್ಷನ್ 274, ಸಿxಆರ್ ಸೇರಿದಂತೆ ಹಲವು ವೈವಿಧ್ಯಮಯ ಕಾಫಿ ತಳಿಗಳ ಸಸ್ಯಗಳು ಇವರ ಬಳಿ ಲಭ್ಯ.

j3tvkannada
ಅಂದ ಹಾಗೆ, ಇವರು ಓದಿದ್ದು ಎಂಬಿಎ. ಬೆಂಗಳೂರಿನಲ್ಲಿ 3 ವರ್ಷ ಕೆಲಸ ಮಾಡಿ, ಕೃಷಿಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ವಾಪಸ್ ಊರಿಗೆ ಬಂದರು. 12 ವರ್ಷದಿಂದ ಕಾಫಿ, ಕಾಳುಮೆಣಸು, ಅಡಿಕೆ ಹಾಗೂ ಭತ್ತವನ್ನು ಬೆಳೆಯುವ ಮೂಲಕ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡರು.
5 ವರ್ಷದಿಂದ ಈಚೆಗೆ ಸಸ್ಯಾಗಾರ ಆರಂಭಿಸಿದರು. 3 ವರ್ಷದಿಂದ ಈಚೆಗೆ ಕಾಫಿ ಸಸ್ಯಗಾರ ಶುರು ಮಾಡಿ ಯಶಸ್ಸು ಪಡೆದಿದ್ದಾರೆ. ಇವರ ಬಳಿ ಕನಿಷ್ಠ ₹ 150 ರಿಂದ ಆರಂಭಿಸಿ, ಗರಿಷ್ಠ ₹ 4 ಸಾವಿರದವರೆಗೆ ಆರ್ಕಿಡ್ ಗಿಡಗಳು ಸಿಗುತ್ತವೆ. ಗಿಡಗಳ ವಯಸ್ಸು, ಅವುಗಳ ಪ್ರಬೇಧದ ಆಧಾರದ ಮೇಲೆ ಬೆಲೆ ನಿರ್ಧಾರಿತವಾಗುತ್ತದೆ ಎಂದು ಚೆಪ್ಪುಡೀರ ಸುಬ್ಬಯ್ಯ ಹೇಳುತ್ತಾರೆ. ಇವರ ಸಮಗ್ರ ಕೃಷಿಯನ್ನು ಮೆಚ್ಚಿದ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.