
ತುಮಕೂರು: ಗ್ರಾಮೀಣ ಪ್ರದೇಶದಲ್ಲಿರುವ ಅನೇಕ ಜಾನಪದ ಕಲಾ ಪ್ರಕಾರಗಳು ಜನರನ್ನು ಬೆಸೆಯುವ ಕೊಂಡಿಯಾಗಿವೆ. ನಶಿಸುತ್ತಿರುವ ಕಲೆಗಳನ್ನು ಯುವಜನರಿಗೆ ಪರಿಚಯಿಸಲು ಸರ್ಕಾರ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಜನಪದ ಉತ್ಸವ ಆಚರಿಸುತ್ತಿದೆ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.

j3tvkannada
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವದಲ್ಲಿ ಅವರು ಮಾತನಾಡಿದರು. ತರಗತಿಗೆ ಹಾಜರಾಗುವುದರಿಂದ ಜ್ಞಾನದಾಹ ಹೆಚ್ಚುವುದು. ಭವಿಷ್ಯ ಅರಿತು, ಗುರಿ ನಿರ್ಧರಿಸಿ ಒಳಿತಿಗಾಗಿ ಅಧ್ಯಯನ ಮಾಡಿ. ಸಮರ್ಥ ಗುರು ಮತ್ತು ಗುರಿ ಇದ್ದರೆ ಶ್ರಮ ವ್ಯರ್ಥವಾಗುವುದಿಲ್ಲ. ಆಸ್ತಿಯಲ್ಲಿ ಬಡತನವಿರಲಿ, ಜ್ಞಾನದ ಬಡತನ ಬೇಡ ಎಂದರು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಸಣ್ಣಹೊನ್ನಯ್ಯ ಕಂಟಲಗೆರೆ ಮಾತನಾಡಿ, ಜಾನಪದ ಉತ್ಸವಗಳು ಸಂಸ್ಕೃತಿಯ ಪ್ರತೀಕ. ಜಾನಪದವು ಜನರ ಬಾಯಿಂದ ಜನಿಸಿದ್ದು ಸುಮಾರು 176 ವಿವಿಧ ಪ್ರಕಾರದ ಜಾನಪದ ಕಲೆಗಳಿಂದ ಸಂಸ್ಕೃತಿ ಶ್ರೀಮಂತವಾಗಿದೆ. ಹಳ್ಳಿಗಳ ಜನರನ್ನು ಭ್ರಾತೃತ್ವ, ಸಹೋದರತೆಯಡಿ ಒಗ್ಗೂಡಿಸುವ ಶಕ್ತಿ ಜನಪದ ಕಲೆಗಿದೆ ಎಂದರು.
ಶಾಸಕರನ್ನು ಎತ್ತಿನಗಾಡಿಯಲ್ಲಿ ವಿವಿಧ ಜನಪದ ತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಸಾಂಪ್ರದಾಯಿಕ ಉಡುಪಿನಲ್ಲಿ ವಿದ್ಯಾರ್ಥಿಗಳು ರಾಶಿಪೂಜೆ, ಪೂಜಾ ಕುಣಿತ, ಡೊಳ್ಳು ಕುಣಿತ, ಜಾನಪದ ಕುಣಿತ, ವೀರಗಾಸೆ, ಜಾನಪದ ಆಟಗಳು, ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಪ್ರಾಂಶುಪಾಲೆ ಮಾಯಾ ಸಾರಂಗಪಾಣಿ, ಪುರಸಭಾಧ್ಯಕ್ಷೆ ಮಂಜುಳ ನಾಗರಾಜು, ಅಧ್ಯಾಪಕರಾದ ರಾಮಾಂಜನಪ್ಪ, ಟಿ.ಎನ್. ನರಸಿಂಹಮೂರ್ತಿ, ಮ್ಯಾನೇಜರ್ ಚೆಲುವಮೂರ್ತಿ, ಸಿ.ಡಿ.ಸಿ ಸದಸ್ಯರಾದ ರೆಹಮಾನ್ ಷರೀಪ್ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಈಶ್ವರಪ್ಪ, ಎಂ.ಕೆ.ಮಂಜುಳ, ಬಿ.ನಿರ್ಮಲ, ಕೆ.ರವಿಕುಮಾರ್ ಹಾಜರಿದ್ದರು.