
ಹುಬ್ಬಳ್ಳಿ: ಧರ್ಮಾಧಾರಿತ ಭಯೋತ್ಪಾದನೆಯನ್ನು ನಾವು ಖಂಡಿಸುತ್ತೇವೆ. ಜಗತ್ತಿನಲ್ಲಿ ಸಾವಿರಾರು ಧರ್ಮಗಳಿದ್ದು. ಎಲ್ಲಾ ಧರ್ಮಗಳು ಕೂಡ ಪರಸ್ಪರ ಒಂದು ಧರ್ಮ ಮತ್ತೊಂದು ಧರ್ಮವನ್ನು ಗೌರವಿಸಬೇಕು. ಆಚರಿಸಬೇಕು ಅಂತೇನಿಲ್ಲ. ಒಂದು ಧರ್ಮ ಮತ್ತೊಂದು ಧರ್ಮದ ಮೇಲೆ ದಾಳಿ ಮಾಡುವುದು ಅತ್ಯಂತ ಅಮಾನುಷವಾದದ್ದು ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ದಾಳಿ ಮಾಡುವುದು ಉಗ್ರವಾದವಾಗುತ್ತದೆ. ಉಗ್ರವಾದ ಇರುವಲ್ಲಿ ಧರ್ಮಕ್ಕೆ ಅವಕಾಶವಿರುವದಿಲ್ಲ.

ಆದರೆ ದ್ವೇಷದಿಂದ ಕೆಲಸ ಮಾಡುವುದನ್ನು ಇಡೀ ಜಗತ್ತು ಖಂಡಿಸುತ್ತದೆ. ಭಾರತ ಈಗಾಗಲೇ ಸಾಕಷ್ಟು ಸಹನೆ ತೋರಿದೆ. ಈಗ ಮತ್ತೆ ಧರ್ಮದ ಮೇಲೆ ದಾಳಿ ಮಾಡಿದ್ದು, ಯುದ್ಧವನ್ನು ನಾವು ಬಯಸುವುದಿಲ್ಲ. ಯುದ್ದ ಆಗಲಿಕ್ಕೆ ಪ್ರಚೋದನೆ ಕೊಡುವ ಇಂತ ಸಂದರ್ಭಗಳು ಬರಬಾರದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಜಾತಿಗಣತಿ ಸರಿಯಾಗಿಲ್ಲ ಎಂಬ ಭಾವನೆ ಇದೆ. ಬಹು ಸಂಖ್ಯಾತರ ಅಸಮಾಧಾನವೂ ಇದೆ. ಕರಾರುವಾಕ್ಕಾಗಿ ಜಾತಿಗಣತಿ ನಡೆಯಬೇಕು. ಇಲ್ಲದಿದ್ರೆ ಒಳ್ಳೆಯದಲ್ಲ. ಮತ್ತೊಮ್ಮೆ ಜಾತಿಗಣತಿ ನಡೆಸುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟರು.
ಕಾಯಕಕ್ಕೆ ಹಾಗೂ ಸಮಾನತೆಗೆ ಒತ್ತು ನೀಡಿದವರು ಬಸವಣ್ಣ . ಜಾತಿ,ಮತ, ಪಂಥ ಧರ್ಮ ಎನ್ನದೇ ಸಮಾನತೆಯ ಸಂದೇಶ ಸಾರಿದವರು ಅವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು. ಹುಬ್ಬಳ್ಳಿಯಲ್ಲಿ ವಿಶ್ವ ಗುರು ಶ್ರೀ ಬಸವೇಶ್ವರರ ಜಯಂತಿ ಅಂಗವಾಗಿ ಇಂದಿರಾ ಗಾಂಧಿ ಗಾಜಿನ ಮನೆ ಆವರಣದಲ್ಲಿ ಶ್ರೀ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು, ಬಸವಣ್ಣನವರ ತತ್ವಗಳು, ವಚನಗಳು ಸಮಾಜಕ್ಕೆ ದಾರಿದೀಪ ಆಗಿವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು.
ವಿಶ್ವ ಗುರು ಬಸವೇಶ್ವರರು ನಾಡಿನ ಸಾಂಸ್ಕೃತಿಕ ರಾಯಭಾರಿ ಅಂತಾ ಘೋಷಣೆ ಮಾಡಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನಾಣ್ಣುಡಿಯಂತೆ ನಡೆಯುತ್ತಾ ಇದ್ದೇವೆ ಎಂದರು. ಕಾಯಕಕ್ಕೆ ದೈವತ್ವದ ಸ್ವರೂಪ ನೀಡಿದ ಬಸವಣ್ಣನವರು, ಪ್ರತಿಯೊಬ್ಬರು ಜೀವನದಲ್ಲಿ ಕಾಯಕ ಮಾಡಲೇಬೇಕು ಎಂದಿದ್ದಾರೆ. ಸತ್ಯಶುದ್ಧ ಕಾಯಕ ದಾಸೋಹಕ್ಕೆ ಪ್ರತಿಯೊಬ್ಬರು ಮಹತ್ವ ನೀಡಿದಾಗ ಮಾತ್ರ ಜೀವನದಲ್ಲಿ ಶಾಂತಿ-ನೆಮ್ಮದಿ ಮತ್ತು ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ .
ಹನ್ನೆರಡನೇ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ಬಸವಣ್ಣನವರು ಮೂಲ ಕಾರಣಕರ್ತರು. ಸಾರ್ವಕಾಲಿಕವಾದ ಅವರ ಸಂದೇಶ- ತತ್ವಗಳು ಎಲ್ಲರಿಗೂ ಮಾರ್ಗದರ್ಶಕ ಮತ್ತು ದಾರಿದೀಪ ಆಗಿವೆ. ವಿಶ್ವದಲ್ಲಿಯೇ ದೊಡ್ಡ ವಿಚಾರವಾದಿ ಎಂದು ಬಸವಣ್ಣನವರನ್ನು ಗುರುತಿಸಲಾಗುತ್ತದೆ. ಸಮಾಜವಾದ, ಸಮತಾವಾದಕ್ಕೆ ಅವರು ಬುನಾದಿ ಹಾಕಿದವರು. ಜನ ಸಾಮಾನ್ಯರಿಗೂ ಅರ್ಥವಾಗುವ ಅವರ ವಚನ ಸಾಹಿತ್ಯ ಪ್ರಜಾ ಸಾಹಿತ್ಯವಾಗಿತ್ತು. ಬಸವಣ್ಣ ಅವರು ಎಂದೆಂದಿಗೂ ಪ್ರಸ್ತುತ ಎಂದರು.