
ಚಿಕ್ಕಮಗಳೂರು: ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂದೂರು, ನೆರಲೆಕೊಪ್ಪ, ಹಂಕಲು ಮನೆ, ನರಿಗುಡ್ಡ, ದಿಡಿಗಿ, ಮಾವಿನಕೆರೆ ಗ್ರಾಮಗಳಿಗೆ ಶೆಟ್ಟಿಕೊಪ್ಪದಿಂದ ಸಂಪರ್ಕ ಕಲ್ಪಿಸುವ ಸೇತುವೆ ಮತ್ತು ರಸ್ತೆ ಸಮಸ್ಯೆಯು ದಶಕಗಳಿಂದ ಪರಿಹಾರ ಕಾಣದೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಶೆಟ್ಟಿಕೊಪ್ಪ ವ್ಯಾಪ್ತಿಯಲ್ಲಿ ಹರಿಯುವ ಹಳ್ಳಕ್ಕೆ ಆಲಂದೂರು, ಗಾಂಧಿಗ್ರಾಮ, ನೆರಲೆಕೊಪ್ಪ, ಹಂಕಲು ಮನೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕಿರು ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆಗೆ ತಡೆಗೋಡೆ ನಿರ್ಮಿಸಿಲ್ಲ. ಮಳೆಗಾಲದಲ್ಲಿ ಹಳ್ಳ ಉಕ್ಕಿದಾಗ ಸೇತುವೆಯ ಮೇಲೆ ನೀರು ನಿಲ್ಲುತ್ತದೆ. ನೀರು ಇಳಿಯುವವರೆಗೂ ಸಂಚಾರ ಸ್ಥಗಿತಗೊಳ್ಳುತ್ತದೆ.

j3tvkananda
ಗ್ರಾಮಸ್ಥರು 7ಕಿ.ಮೀ ಸುತ್ತಿಬಳಸಿ ಹಾರೆಕೊಪ್ಪ ಗ್ರಾಮದ ಮೂಲಕ ಶೆಟ್ಟಿಕೊಪ್ಪ ಗ್ರಾಮಕ್ಕೆ ಬರಬೇಕಾಗುತ್ತದೆ. ಮಳೆಗಾಲದಲ್ಲಿ ಮರದ ದಿಮ್ಮಿಗಳು ಸೇತುವೆ ಕೆಳಗೆ ಸಿಕ್ಕಿಕೊಳ್ಳುವುದರಿಂದ ನೀರಿನ ಹರಿವಿಗೆ ಅಡ್ಡಿಯಾಗುತ್ತದೆ. ಮಳೆಗಾಲದ ಬಹುತೇಕ ದಿನಗಳಲ್ಲಿ ಸೇತುವೆ ಮುಳುಗಿದಾಗ ಶಾಲಾ ವಾಹನಗಳು ಗ್ರಾಮಕ್ಕೆ ಬರಲು ಸಾಧ್ಯವಾಗುವುದಿಲ್ಲ. ಆಗ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಇರಬೇಕಾಗುತ್ತದೆ. ಈ ಸೇತುವೆಯನ್ನು ಎತ್ತರಿಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ಆದರೆ, ದಶಕಗಳು ಕಳೆದರೂ ಈ ಬೇಡಿಕೆ ಸಾಕಾರಗೊಂಡಿಲ್ಲ.
ಶೆಟ್ಟಿಕೊಪ್ಪದಿಂದ ನೆರಲೆ ಕೊಪ್ಪ, ಆಲಂದೂರು, ಗಾಂಧಿ ಗ್ರಾಮ ಮತ್ತು ಹಂಕಲು ಮನೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೂ ಶಿಥಿಲಗೊಂಡಿದೆ. ಈ ಸೇತುವೆಯ ಮೇಲೂ ಮಳೆಗಾಲದಲ್ಲಿ ನೀರು ಹರಿಯುತ್ತದೆ. ಇಲ್ಲಿ ಹೊಸ ಸೇತುವೆ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ. ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ಹಳ್ಳಕ್ಕೆ ಗಾಂಧಿಗ್ರಾಮ, ಚನಮಣೆ, ಮಂಜಿನಕೊಪ್ಪ ಗ್ರಾಮದಲ್ಲಿ ನಿರ್ಮಿಸಿರುವ ಸೇತುವೆಗಳ ಎತ್ತರವೂ ಕಡಿಮೆ ಇರುವುದರಿಂದ ಮಳೆಗಾಲದಲ್ಲಿ ನೀರು ಸೇತುವೆಯ ಮೇಲೆ ಹರಿಯುತ್ತದೆ ಇಲ್ಲೂ ಎತ್ತರದ ಸೇತುವೆ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.