
ತುಮಕೂರು: ತಾಲ್ಲೂಕಿನ ಮುಗದಾಳಬೆಟ್ಟ ಗೊಲ್ಲರಹಟ್ಟಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಶಾಸಕ ಎಚ್.ವಿ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.

j3tvkannada
ಗೊಲ್ಲರಹಟ್ಟಿಯಲ್ಲಿ ಸುಮಾರು ಮೂರು ದಶಕಗಳಿಂದ ಸಮುದಾಯದವರು ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಗ್ರಾಮದ ಕೆಲವರು ಶೌಚಾಲಯ ಹಾಗೂ ಮನೆ ನಿರ್ಮಿಸಿಕೊಳ್ಳಲು ಅಡ್ಡಿಪಡಿಸುತ್ತಿದ್ದಾರೆ. ಈಗಾಗಲೇ ನ್ಯಾಯಾಲಯ, ತಹಶೀಲ್ದಾರ್, ಉಪವಿಭಾಗಾಧಿಕಾರಿ ಮನೆ ನಿರ್ಮಿಸಿಕೊಳ್ಳುವಂತೆ ಆದೇಶ ನೀಡಿದ್ದಾರೆ.
ಆದರೆ, ಖಾಸಗಿ ವ್ಯಕ್ತಿಗಳು ಕನಿಷ್ಠ ಶೌಚಾಲಯ ನಿರ್ಮಿಸಿಕೊಳ್ಳಲೂ ಸಹ ಅಡ್ಡಿಪಡಿಸಿ ಬಡ ಜನರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ದೂರಿದರು. ಶಾಸಕ ಎಚ್.ವಿ ವೆಂಕಟೇಶ್ ಮನವಿ ಸ್ವೀಕರಿಸಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ತಿಳಿಸುತ್ತೇನೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಶಿವು, ಈಶ್ವರಪ್ಪ, ಗುಡಿಪಲ್ಲಪ್ಪ ಇತರರು ಉಪಸ್ಥಿತರಿದ್ದರು.