
ದಾವಣಗೆರೆ: ತಾಲ್ಲೂಕಿನ ತಾವರೆಕೆರೆಯ ಮಸೀದಿಯ ಎದುರು ಸಾರ್ವಜನಿಕವಾಗಿ ಥಳಿತಕ್ಕೆ ಒಳಗಾದ ಇಬ್ಬರು ಮಹಿಳೆಯರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡಾ.ಅರ್ಚನಾ ಮುಜುಂದಾರ್ ಅವರು ಸೋಮವಾರ ಭೇಟಿ ಮಾಡಿ ಸಾಂತ್ವನ ಹೇಳಿದರು. ಅಮಾನವೀಯ ಕೃತ್ಯ ನಡೆಸಿದ ಎಲ್ಲ ಆರೋಪಿಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಪರ ಪುರುಷನೊಂದಿಗೆ ಸಲುಗೆಯಿಂದ ವರ್ತಿಸಿದ ಮಹಿಳೆ ಹಾಗೂ ಇದಕ್ಕೆ ಸಹಕರಿಸಿದ ಮತ್ತೊಬ್ಬ ಮಹಿಳೆಯನ್ನು ಜಾಮಿಯಾ ಮಸೀದಿಗೆ ಕರೆಸಿ ಅಮಾನವೀಯವಾಗಿ ಹಲ್ಲೆ ನಡೆಸಲಾಗಿತ್ತು. ದೊಣ್ಣೆ, ಕಲ್ಲು, ವೈರ್, ಪೈಪ್ಗಳಿಂದ ಹೊಡೆದು ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿಡಿಯೊ ಆಧಾರಿಸಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

j3tvkannada
ಮಹಿಳೆಯರನ್ನು ಸಾರ್ವಜನಿಕವಾಗಿ ಥಳಿಸಿದ ಜಾಮಿಯಾ ಮಸೀದಿಯ ಆವರಣಕ್ಕೆ ಡಾ.ಅರ್ಚನಾ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಗ್ರಾಮದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಸಭೆ ನಡೆಸಿದರು. ಸಭೆಗೆ ಧಾವಿಸಿದ ಅರ್ಚನಾ ಅವರನ್ನು ತಬ್ಬಿದ ಮಹಿಳೆಯರು ಸಂಕಷ್ಟಗಳನ್ನು ತೋಡಿಕೊಂಡರು. ಸಂತ್ರಸ್ತ ಮಹಿಳೆಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ವಿಡಿಯೊದಲ್ಲಿ ಕಾಣಿಸದ ಮತ್ತೊಬ್ಬ ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ಹೆಚ್ಚು ಗಾಯಗೊಂಡಿರುವ ಈ ಮಹಿಳೆ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಯನ್ನು ಕಂಡು ಆಘಾತವಾಗಿದೆ ಎಂದು ಡಾ.ಅರ್ಚನಾ ಹೇಳಿದರು.
ವಿಡಿಯೊ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 12ರಿಂದ 15 ಜನರು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು ವಿಡಿಯೊದಲ್ಲಿದೆ, ಎಲ್ಲರನ್ನು ಪತ್ತೆ ಮಾಡಿ ಬಂಧಿಸುವ ಅಗತ್ಯವಿದೆ ಎಂದರು. ಇಂತಹ ಅಮಾನವೀಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಮಹಿಳೆಯರನ್ನು ಸಾರ್ವಜನಿಕವಾಗಿ ಥಳಿಸುವ ಘಟನೆಗಳು ಮರುಕಳುಹಿಸಬಾರದು. ಯಾವುದೇ ಧರ್ಮಿಯರಲ್ಲಿ ಇಂತಹ ಕೃತ್ಯ ನಡೆದರೂ ಖಂಡನೀಯ. ಯಾರೊಬ್ಬರು ಇಂತಹ ಕೃತ್ಯದಲ್ಲಿ ತೊಡಗಬಾರದು. ಇಲ್ಲಿ ಧರ್ಮ ನಗಣ್ಯವಾಗಿದ್ದು, ಮಹಿಳೆಯ ಸುರಕ್ಷತೆ ಮಾತ್ರವೇ ಮುಖ್ಯ ಎಂದರು.

j3tvkannada
ಮಹಿಳೆಯರಲ್ಲಿ ಶಿಕ್ಷಣದ ಕೊರತೆ ಇದೆ. ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಹಿಂಸೆಯನ್ನು ಮಹಿಳೆ ಸಹಿಸಿಕೊಳ್ಳುತ್ತ ಬಂದಿದ್ದಾರೆ. ಶಿಕ್ಷಣದ ಅಗತ್ಯ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕಿದೆ. 10 ವರ್ಷದ ಮಕ್ಕಳು ಕೂಡ ಶಿಕ್ಷಣದಿಂದ ಹೊರಗೆ ಉಳಿದಿರುವುದು ಗಮನಕ್ಕೆ ಬಂದಿದೆ. ಮಕ್ಕಳನ್ನು ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ನೀಡಬೇಕಿದೆ ಎಂದು ಹೇಳಿದರು.ಮಹಿಳೆಯರ ಸುರಕ್ಷತೆಗಾಗಿ ಆಯೋಗವು ಸಹಾಯವಾಣಿ ತೆರೆದಿದ್ದು, ಸಂಕಷ್ಟಕ್ಕೆ ಸಿಲುಕಿದವರು ಸಂಪರ್ಕಿಸಬಹುದಾಗಿದೆ. ಸಹಾಯವಾಣಿ 24X7 ಕಾರ್ಯನಿರ್ವಹಿಸಲಿದ್ದು, ಆನ್ಲೈನ್ ದೂರು ದಾಖಲಿಸಿಕೊಳ್ಳಲಾಗುತ್ತದೆ.
ಪ್ರತಿಯೊಬ್ಬ ಮಹಿಳೆಗೂ ಶಾಂತಿ ಹಾಗೂ ಸುರಕ್ಷಿತ ಜೀವನ ನಡೆಸುವ ಅವಕಾಶ ಸಿಗಬೇಕು ಎಂದರು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಆಯೋಗದಿಂದ ಮಾತ್ರವೇ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಬೇಕಾಗಿದೆ. ತಾವರೆಕೆರೆಯಲ್ಲಿ ನಡೆದ ಘಟನೆ ದೇಶದಲ್ಲಿ ಎಲ್ಲಿಯೂ ನಡೆಯದಂತೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಎಚ್ಚರಿಕೆ ವಹಿಸುತ್ತದೆ ಎಂದು ಹೇಳಿದರು. ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸ್ಯಾಮ್ ವರ್ಗಿಸ್, ತಹಶೀಲ್ದಾರ್ ಎನ್.ಜೆ. ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ, ಯೋಜನಾಧಿಕಾರಿ ಆರ್. ನಿರ್ಮಲ ಹಾಜರಿದ್ದರು.

j3tvkannada
ದಾವಣಗೆರೆ ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಇದು ತೀವ್ರ ಕಳವಳಕಾರಿ ಸಂಗತಿ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡಾ.ಅರ್ಚನಾ ಮುಜುಂದಾರ್ ಹೇಳಿದರು. ಜಿಲ್ಲಾ ಆಸ್ಪತ್ರೆಯ ಸಖಿ ಘಟಕಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಾವಿರ ಗರ್ಭಿಣಿಯರಲ್ಲಿ 7 ಬಾಲಕಿಯರು ಇರುವುದು ರಾಷ್ಟ್ರೀಯ ಸರಾಸರಿ. ಜಿಲ್ಲೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಬಾಲ್ಯ ವಿವಾಹ ಸಾಮಾಜಿಕ ಹಿಂದುಳಿಯುವಿಕೆಗೂ ಕಾರಣವಾಗಿದೆ. ಬಾಲ್ಯ ವಿವಾಹ ಹದಿಹರೆಯದ ಗರ್ಭಧಾರಣೆಯಿಂದ ಆಗುವ ತೊಂದರೆಗಳ ಕುರಿತು ಜಾಗೃತಿ ಮೂಡಿಸುವ ಪಠ್ಯವನ್ನು ಶಿಕ್ಷಣದಲ್ಲಿ ಸೇರ್ಪಡೆ ಮಾಡಬೇಕಿದೆ. ಈ ಕುರಿತು ಆಯೋಗವು ಪ್ರಧಾನಮಂತ್ರಿಗೆ ಪತ್ರ ಬರೆದಿದೆ’ ಎಂದು ಹೇಳಿದರು.