
ವಿಜಯಪುರ(ಇಂಡಿ): ಬೀದರ್ ಹಾಗೂ ಶಿವಮೊಗ್ಗದಲ್ಲಿ ಪರೀಕ್ಷಾ ಸಂದರ್ಭದಲ್ಲಿ ಜನಿವಾರು ತೆಗೆಸುವುದು ಮತ್ತು ಜನಿವಾರು ಕತ್ತರಿಸಿ ಪರೀಕ್ಷೆಗೆ ಕೂರಿಸಲು ಮುಂದಾದ ಕ್ರಮ ಖಂಡನೀಯ. ಇದು ಹಿಂದುತ್ವವನ್ನು ಅಳಿಸಿ ಹಾಕುವ ಮುನ್ಸೂಚನೆ ಎಂದು ಬಿಜೆಪಿ ಮುಖಂಡ ದಯಾಸಾಗರ ಪಾಟೀಲ ಆರೋಪಿಸಿದರು.

j3tvkannada
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದುತ್ವದ ವಿರೋಧಿಯಾಗಿದೆ. ಇಡೀ ವಿಶ್ವದಲ್ಲಿಯೇ ಭಾರತವು ಏಕೈಕ ಹಿಂದೂ ರಾಷ್ಟ್ರ. ಇಲ್ಲಿ ನಮ್ಮದೇ ಆಚರಣೆ ಸಂಪ್ರದಾಯ, ಸಂಸ್ಕೃತಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗದ ರೀತಿ ಭಯದ ವಾತಾವರಣ ಮೂಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಹಿರಿಯ ನ್ಯಾಯವಾದಿ ಜೆ.ಎಸ್.ಜೋಶಿ ಮಾತನಾಡಿ, ಜನಿವಾರ ಇದು ಕೇವಲ ಬ್ರಾಹ್ಮಣರಿಗೆ ಸಂಬಂಧಿಸಿದಲ್ಲ. ಇದೊಂದು ಹಿಂದುತ್ವದ ಸಂಕೇತ ಎಂದರು ತಪ್ಪಾಗಲಾರದು. ಜನಿವಾರವನ್ನು ವಿಶ್ವಕರ್ಮ, ಮರಾಠರು, ಪತ್ತಾರ, ಕಂಬಾರ, ಕುಂಬಾರ, ಬಡಿಗೇರ ಸೇರಿದಂತೆ ಇನ್ನಿತರ ಸಮುದಾಯದವರು ಧರಿಸುತ್ತಾರೆ. ಹೀಗಾಗಿ ಜನಿವಾರ ತೆಗೆಸಲು ಮುಂದಾದ ಹಿಂದೂ ವಿರೋಧಿಗಳು ಯಾರು ಎಂಬುದನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸಬಾರದು. ಇದನ್ನು ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಎಂದರು.
ಮುಖಂಡ ರಾಮಚಂದ್ರ ಕಾವಿ ಮಾತನಾಡಿ, ಹಿಂದೂ ಸಮುದಾಯದ ಏಳಿಗೆಯಲ್ಲಿ ಬ್ರಾಹ್ಮಣ ಸಮಾಜದ ಪಾತ್ರ ಸಾಕಷ್ಟಿದೆ. ಬ್ರಾಹ್ಮಣರು ಈ ಹಿಂದೂ ಸಂಪ್ರದಾಯವನ್ನು ಸಂಸ್ಕೃತಿಯನ್ನು ಸರ್ವ ಸಮುದಾಯದವರನ್ನು ತೆಗೆದುಕೊಂಡು ಹಿಂದುತ್ವ ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಹಿಂದೂ ಸಂಪ್ರದಾಯ ಮುಂದುವರಿಸಿಕೊಂಡು ಹೋಗಲು ಬ್ರಾಹ್ಮಣರ ಕೊಡುಗೆ ಅನನ್ಯವಾಗಿದೆ. ಅಂತಹ ಸಮುದಾಯದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಪರೀಕ್ಷೆಗೆ ಕೂರಿಸಲು ಮುಂದಾಗಿರುವುದು ಖಂಡನೀಯ. ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮವಾಗಬೇಕು. ಇದರಲ್ಲಿ ಕಾಣದ ಕೈಗಳ ಕೈವಾಡವಿದ್ದು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರವು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಸ್.ಪಿ.ಕುಲಕರ್ಣಿ, ಗೋಪಾಲ ಕುಲಕರ್ಣಿ, ರಂಘನಾಥ ಚವ್ಹಾಣ, ಕೃಷ್ಣಾ ಕುಲಕರ್ಣಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.