
ಬೆಂಗಳೂರುಗ್ರಾಮಾಂತರ :ದೇವನಹಳ್ಳಿ ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಪುರದಲ್ಲಿ ಕೂಸಿನ ಮನೆಯ ಪಕ್ಕದಲ್ಲಿ ಪಾಳು ಬಿದ್ದಿರುವ ಶಾಲಾ ಕಟ್ಟಡ ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

j3tvkannada
ಶಾಲಾ ಕಟ್ಟಡ ಶಿಥಿಲಗೊಂಡು ಕೆಲ ಭಾಗದ ಗೋಡೆ ಮತ್ತು ಚಾವಣಿ ಕುಸಿದಿದೆ. ಮಳೆಗಾಲ ಆರಂಭಗೊಂಡಿದ್ದು, ಕಟ್ಟಡ ಇನ್ನಷ್ಟು ಶಿಥಿಲಗೊಂಡು ಕೂಸಿನ ಮನೆಗೆ ಹೊಂದಿಕೊಂಡಿರುವ ಗೋಡೆ ಕುಸಿದರೆ ಕೂಸಿನ ಮನೆಯ ಮಕ್ಕಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಶಿಥಿಲವಾಗಿರುವ ಕಟ್ಟಡದ ಗೋಡೆಗಳು ಕುಸಿದು ಬೀಳುವ ಮೊದಲೇ ಕಟ್ಟಡ ತೆರವುಗೊಳಿಸಿ, ಮುಂದೆ ಆಗುವ ಅಪಾಯ ತಪ್ಪಿಸಬೇಕು. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.
ಕಟ್ಟಡ ಹಳೆಯದಾಗಿ ಪಾಳು ಬಿದ್ದಿದ್ದು. ಆಗಾಗ ಇಲ್ಲಿ ಹಾವುಗಳ ದರ್ಶನವೂ ಆಗುತ್ತದೆ. ನಮ್ಮ ಮಕ್ಕಳು ಸಣ್ಣವರು, . ಆಕಸ್ಮಿಕವಾಗಿ ಹೊರಗೆ ಬಂದಾಗ ಕಟ್ಟಡ ಬಿದ್ದರೆ, ಅಪಾಯವಾಗುವ ಸಂಭವ ಜಾಸ್ತಿಯಿದೆ. ಆದ್ದರಿಂದ ಸಂಬಂಧ ಪಟ್ಟವರು ಕಟ್ಟಡ ತೆರವುಗೊಳಿಸಬೇಕೆಂದು ಕೂಸಿನ ಮನೆಗೆ ಮಕ್ಕಳನ್ನು ಕಳುಹಿಸುವ ಪೋಷಕರು ಒತ್ತಾಯಿಸಿದ್ದಾರೆ.
ಶಾಲೆಯ ಹಳೆಯ ಕಟ್ಟಡ ತೆರವುಗೊಳಿಸುವಂತೆ ಇಲಾಖೆಯ ಮೂಲಕ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯಿತಿ ರಾಜ್ ಇಲಾಖೆಗೆ ಪತ್ರ ಬರೆಯಲಾಗಿದೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ.