
ದಕ್ಷಿಣ ಕನ್ನಡ: ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ, ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ದೇಶದ ಯುವಶಕ್ತಿಗೆ ಸಾಧ್ಯ. ಆದರೆ, ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಸಹಕಾರ ನೀಡದೆ ಇರುವುದು ಸಾಧನೆಗೆ ಅಡ್ಡಿಯಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಯುವ ಸಂಪನ್ಮೂಲ ಇರುವ ದೇಶದ ಜೊತೆಗೆ ನಾವು ಹೋರಾಡಲು ಕಷ್ಟವಾಗುತ್ತಿದೆ ಎಂದು ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್ ಗೌರವಾಧ್ಯಕ್ಷ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಖೇಲೋ ಇಂಡಿಯಾಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಈಜುಕೊಳ ಆವರಣದಲ್ಲಿ ದಕ್ಷಿಣ ಕನ್ನಡ ಸ್ವಿಮ್ಮಿಂಗ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

j3tvkannada
ದಕ್ಷಿಣ ಕನ್ನಡ ಈಜುಗಾರರ ಸಂಘದ ಅಧ್ಯಕ್ಷ ಯತೀಶ್ ಬೈಕಂಪಾಡಿ ಮಾತನಾಡಿದರು. ಭಾರತದ ಸ್ವಿಮ್ಮಿಂಗ್ ಮಾಜಿ ಕೋಚ್ ಪಾರ್ಥ ವಾರಣಾಸಿ ಮಾತನಾಡಿ, ಭಾರತದಲ್ಲಿ 2030ರ ವೇಳೆಗೆ ಕ್ರೀಡೆ ಮುಖ್ಯವಾದ ವೃತ್ತಿಯಾಗಲಿದೆ. ಈಜು ಕ್ರೀಡೆಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ ಎಂದು ಹೇಳಿದರು. ಬಿಹಾರದ ಗಯಾದಲ್ಲಿ ಮೇ 5ರಿಂದ 9ರವರೆಗೆ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಚಿಂತನ್ ಶೆಟ್ಟಿ, ಪ್ರತೀಕ್ಷಾ ಶೆಣೈ ಹಾಗೂ ಅಲೈಸ್ಟರ್ ಸ್ಯಾಮುಲ್ ರೇಗೊ ಅವರಿಗೆ ದಕ್ಷಿಣ ಕನ್ನಡ ಈಜುಗಾರರ ಸಂಘದಿಂದ ತಲಾ ₹15,000 ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ತಲಾ ₹ 5,000 ಮೊತ್ತದ ಚೆಕ್ ನೀಡಿ ಅಭಿನಂದಿಸಲಾಯಿತು. ದಕ್ಷಿಣ ಕನ್ನಡ ಈಜುಗಾರರ ಸಂಘದ ಕಾರ್ಯದರ್ಶಿ ಮಹೇಶ್ ಕೋಡಿಕಲ್, ಮಂಗಳ ಈಜುಗಾರರ ಕ್ಲಬ್ನ ಅಧ್ಯಕ್ಷ ಶಿವಾನಂದ ಗಟ್ಟಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಈಜುಗಾರರ ಸಂಘದ ಸಹ ಕಾರ್ಯದರ್ಶಿ ಶರ್ಲಿರೇಗೊ ನಿರೂಪಿಸಿದರು.