
ಉತ್ತರಕನ್ನಡ: ಹತ್ಯೆಗೀಡಾಗಿರುವ ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು 1996-98ರ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಜೊಯಿಡಾ ತಾಲ್ಲೂಕಿನಲ್ಲಿ ದಟ್ಟ ಕಾಡಿನ ನಡುವೆ, ಕಾಳಿನದಿಯ ಅಂಚಿನಲ್ಲಿ ಹತ್ತಾರು ಎಕರೆ ಜಮೀನು ಖರೀದಿಸಿದ್ದರು. ಈ ಜಾಗದಲ್ಲಿ ಬಹುಪಾಲು ಆಸ್ತಿ ಅವರ ಪುತ್ರ ಕಾರ್ತಿಕೇಶ್ ಹೆಸರಿನಲ್ಲಿದೆ.

j3tvkannada
ಜೊಯಿಡಾದ ಬಾಡಗುಂದ ಗ್ರಾಮದ ಸರ್ವೆ ನಂ.10ರಲ್ಲಿ ಸುಮಾರು 5 ಎಕರೆ ಜಮೀನು ಹೊಂದಿದ್ದು, ಸದ್ಯ ಈ ಜಾಗವನ್ನು ಖಾಸಗಿ ರೆಸಾರ್ಟ್ವೊಂದಕ್ಕೆ ರಿವರ್ ಯಾಫ್ಟಿಂಗ್ ಚಟುವಟಿಕೆ ನಡೆಸಲು ಲೀಸ್ಗೆ ನೀಡಲಾಗಿದೆ. ನಾಗೋಡಾ ಗ್ರಾಮದಲ್ಲಿ 2.5 ಎಕರೆ ಜಾಗವಿದ್ದು, ಅಲ್ಲಿ ಫಾರ್ಮ್ ಹೌಸ್ ಕೂಡ ಇದೆ. ಅದರ ಪಕ್ಕದಲ್ಲೇ ಶ್ರೀಗಂಧ, ಬಾಳೆ, ವಿವಿಧ ಹಣ್ಣಿನ ಗಿಡಗಳ ತೋಟ ನಿರ್ಮಿಸಲಾಗಿದೆ. ಇವೆರಡೂ ಜಮೀನು ಅವರ ಪುತ್ರನ ಹೆಸರಿನಲ್ಲಿವೆ.
ನಾಗೋಡಾದಲ್ಲಿ ಕಟ್ಟಿಸಿದ್ದ ಫಾರ್ಮ್ ಹೌಸ್ಗೆ ಓಂ ಪ್ರಕಾಶ್ ಅವರು ಆಗಾಗ ಭೇಟಿ ನೀಡುತ್ತಿದ್ದರು. ಆದರೆ, ಸ್ಥಳೀಯರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಅವರು ಜಮೀನು ಖರೀದಿಸಿದ್ದ ವೇಳೆ ಇಲ್ಲಿನ ಭೂಮಿ ಕಡಿಮೆ ಬೆಲೆಗೆ ಇದ್ದವು. ಈಗ ಅವು ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತವೆ ಎಂದು ಪ್ರವಾಸೋದ್ಯಮಿಯೊಬ್ಬರು ತಿಳಿಸಿದರು. ಓಂ ಪ್ರಕಾಶ್ ಅವರಿಗೆ ಪರಿಸರ ಕಾಳಜಿ ಹೆಚ್ಚಿತ್ತು. ಈ ಉದ್ದೇಶಕ್ಕಾಗಿಯೇ ಅವರು ಜೊಯಿಡಾದಲ್ಲಿ ಜಾಗ ಖರೀದಿಸಿದ್ದರು. ಅಲ್ಲಿನ ಪರಿಸರವನ್ನು ಅವರು ಹೆಚ್ಚು ಇಷ್ಟಪಡುತ್ತಿದ್ದರು ಎಂದು ನಿವೃತ್ತ ಪೊಲೀಸ್ ಅಧಿಕಾರಿ, ಓಂ ಪ್ರಕಾಶ್ ಅವರ ಒಡನಾಡಿ ಎನ್.ಟಿ.ಪ್ರಮೋದ ರಾವ್ ಪ್ರತಿಕ್ರಿಯಿಸಿದರು.