
ಚಿಕ್ಕಮಗಳೂರು: ಕಳೆದ ಕೆಲವು ದಿನಗಳಿಂದ ಆಲ್ಲೂರು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆಯಿಂದಾಗಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಹಿಂಭಾಗದ ಆವರಣ ಗೋಡೆಯ ಬಳಿ ಮಣ್ಣು ಕುಸಿತದಿಂದ ದೊಡ್ಡ ರಂಧ್ರ ಸೃಷ್ಟಿಯಾಗಿದೆ. ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ರಾಜ್ಯ ಹೆದ್ದಾರಿ 27 ಹಾದು ಹೋಗಿದ್ದು, ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಪ್ಲಾಸ್ಟಿಕ್ ಕಸ, ರಸ್ತೆಯಿಂದ ಹರಿದು ಹೋದ ಮಣ್ಣು ಚರಂಡಿ ಸೇರಿ, ನೀರಿನ ಹರಿವು ಸರಿಯಾಗಿ ಆಗುತ್ತಿಲ್ಲ.

ಇದರಿಂದಾಗಿ ಮಳೆ ಬಂದರೆ ನೀರು ನೇರವಾಗಿ ಆಸ್ಪತ್ರೆಯ ಆವರಣದ ಒಳಗೆ ಸೇರಿ, ಕೆರೆಯಂತಾಗುತ್ತದೆ. ಆಸ್ಪತ್ರೆಯ ಹಿಂಭಾಗದಲ್ಲಿ ಇದ್ದ ಶೌಚಾಲಯ ಹಳೆಯ ಸಂಪರ್ಕ ಗುಂಡಿಯ ಮಣ್ಣು ಕುಸಿತದಿಂದ ಅಪಾಯ ಸೃಷ್ಟಿಯಾಗಿದೆ. ಪಂಚಾಯಿತಿ ವತಿಯಿಂದ ಶೀಘ್ರ ಇದನ್ನು ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಪಿ.ಡಿ.ಒ ಶಂಶೂನ್ ನಹರ್, ಈ ಸಮಸ್ಯೆ ಕುರಿತು ತಾಲ್ಲೂಕು ಆರೋಗ್ಯ ಅಧಿಕಾರಿ ಜೊತೆ ಚರ್ಚಿಸಲಾಗುವುದು. ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದರು.