
ಹಾಸನ: ‘ರೈತರು ಸಾಕಿರುವ ರಾಸುಗಳಿಗೆ (ಹಸುಗಳಿಗೆ) ಕಡ್ಡಾಯವಾಗಿ ವರ್ಷಕ್ಕೆ ₹ 800 ವಿಮೆಯನ್ನು ಕಟ್ಟಿ, ಅನಾಹುತದಿಂದ ಆಗುವ ನಷ್ಟದಿಂದ ಪಾರಾಗಿ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಸೋಮವಾರ ಹೋಬಳಿಯ ಕೊತ್ತನಹಳ್ಳಿಯಲ್ಲಿ ಹೇಳಿದರು.
ಗ್ರಾಮದಲ್ಲಿ ಹಾಲು ಉತ್ಪಾದಕರು ಮಹಿಳಾ ಸಹಕಾರ ಸಂಘದ ಕಟ್ಟಡ ನಿರ್ಮಾಣ ಮತ್ತು ಪಡಿತರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅನಾರೋಗ್ಯ ಸೇರಿದಂತೆ ಇತರೆ ಕಾರಣಗಳಿಂದ ಹಸು ಮರಣ ಹೊಂದಿದ್ದಾಗ, ₹ 70 ಸಾವಿರ ಪರಿಹಾರ ಸಿಗುತ್ತದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಇದಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬರೂ ವಾಹನಗಳ ವಿಮೆ ಮತ್ತು ವಾಹನ ಚಾಲನ ಪರವಾನಗಿಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ನಿಯಮಾನುಸಾರ ಚಾಲನೆ ಮಾಡುವ ಮೂಲಕ ತಮ್ಮ ಕುಟುಂಬವನ್ನು ಸುರಕ್ಷಿತವಾಗಿ ಇಡಬೇಕು’ ಎಂದು ಹೇಳಿದರು.
‘ವೃದ್ಧರಿಗೆ ಅನುಕೂಲಕ್ಕಾಗಿ ಕೊತ್ತನಹಳ್ಳಿ ಗ್ರಾಮದಲ್ಲಿ ಪ್ರತಿ ತಿಂಗಳ 3ನೇ ಸೋಮವಾರ ಮತ್ತು ಮಂಗಳವಾರ ಪಡಿತರವನ್ನು ವಿತರಣೆ ಮಾಡಲಾಗುವುದು. ಸಹಕಾರ ಸಂಘಗಳ ಮೂಲಕ ರೈತರಿಗೆ ಹೆಚ್ಚಿನ ನೆರವು ನೀಡಿರುವುದಾಗಿ ತಿಳಿಸಿದರು.
‘ಗ್ರಾಮದಿಂದ ತೂಬಿನಕೆರೆ ಮತ್ತು ತಣ್ಣಿರು ಹಳ್ಳದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಕಟ್ಟಡ ನಿರ್ಮಾಣಕ್ಕೆ ಹಾಸನ ಹಾಲು ಒಕ್ಕೂಟದಿಂದ ₹ 3 ಲಕ್ಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹ 2 ಲಕ್ಷ, ಕೆಎಂಎಫ್ನಿಂದ ₹ 4.5 ಲಕ್ಷ ಸಹಾಯಧನ ಬರುತ್ತದೆ’ ಎಂದರು.
ಜೆಡಿಎಸ್ ಮುಖಂಡ ರವಿಕುಮಾರ್ ಮಾತನಾಡಿದರು .ಹಿರೀಸಾವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ರಾಮೇಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ. ಮಹೇಶ್, ನಿರ್ದೇಶಕರಾದ ಬೋರೇಗೌಡ, ಕೆಂಪೇಗೌಡ, ಬೋರಣ್ಣ, ಬಾಬು, ನಾಗೇಶ್, ನರಸಿಂಹಮೂರ್ತಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ರೇಣುಕಾ ಮಂಜೇಗೌಡ, ವಿಸ್ತರಣಾಧಿಕಾರಿ ದಯಾನಂದ್, ಸೊಸೈಟಿ ಹರೀಶ್, ಮುಖಂಡರಾದ ಎಚ್.ಜಿ. ಮಂಜುನಾಥ್, ಮರೀಸ್ವಾಮಣ್ಣ, ರಾಜಣ್ಣ, ಅಣ್ಣಯ್ಯ, ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು.