
ತುಮಕೂರು: ಪಾವಗಡದಲ್ಲಿ ಸೋಮವಾರ ಸಮಗ್ರ ನೀರು ಹೋರಾಟ ವೇದಿಕೆ ನೇತೃತ್ವದಲ್ಲಿ ಕಲಾತಂಡಗಳೊಂದಿಗೆ ರೈತರು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮೆರವಣಿಗೆ ನಡೆಸಲಾಯಿತು.

j3tvkannada
ಪಟ್ಟಣದ ಗುರುಭವನದಿಂದ ಎಸ್ಎಸ್ಕೆ ಸಮುದಾಯ ಭವನದವರೆಗೆ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಸಮಗ್ರ ನೀರು ಹೋರಾಟ ವೇದಿಕೆಯ ಅಧ್ಯಕ್ಷ ಎಸ್.ಶಿವಪ್ರಸಾದ್ ಮಾತನಾಡಿ, ತಾಲ್ಲೂಕಿನ ಜನತೆಯ ಹೋರಾಟದಿಂದಾಗಿ ಕುಡಿಯುವ ನೀರು ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ಹರಿಯುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು, ರೈತರು ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು. ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲ ಸಮುದಾಯದ ಪ್ರಮುಖರು, ರೈತ ಸಂಘ, ದಲಿತಪರ, ಪ್ರಗತಿಪರ ಸಂಘಗಳ ಪದಾಧಿಕಾರಿಗಳು ಹೋರಾಟದಲ್ಲಿ ಭಾಗಿಯಾಗಿ ವೇದಿಕೆಗೆ ಶಕ್ತಿ ತುಂಬಿದ್ದಾರೆ ಎಂದರು. ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ, ಸಚಿವ ಸಂಪುಟ, ಸದನದಲ್ಲಿಯೂ ನೀರಿಗಾಗಿ ಸಾಕಷ್ಟು ಬಾರಿ ಧ್ವನಿ ಎತ್ತಲಾಗಿತ್ತು. ಸರ್ಕಾರ ಕೂಡಲೇ ತಾಲ್ಲೂಕಿಗೆ ನೀರು ಹರಿಸಬೇಕು ಎಂದು ಒತ್ತಡ ಹೇರಲಾಗಿತ್ತು ಎಂದರು.
ಮಾಜಿ ಸಂಸದ ಜನಾರ್ದನಸ್ವಾಮಿ, ಮಳೆನೀರು ಸಮುದ್ರಕ್ಕೆ ಹರಿದು ವ್ಯರ್ಥವಾಗುತ್ತಿದೆ. ವ್ಯರ್ಥವಾಗುವ ನೀರನ್ನು ಬರ ಪೀಡಿತ ಪ್ರದೇಶಕ್ಕೆ ಹರಿಸುವ ಕೆಲಸವಾಗಬೇಕು. ಸರ್ಕಾರ ರೈತರಿಗೆ, ಜನತೆಗೆ ಅನುಕೂಲವಾಗುವ ಯೋಜನೆ ರೂಪಿಸಬೇಕು ಎಂದರು. ಸಮಗ್ರ ನೀರು ಹೋರಾಟ ವೇದಿಕೆಯ ಕಾರ್ಯದರ್ಶಿ ಸೊಗಡು ವಿ.ವೆಂಕಟೇಶ್, ಸಾವಿರಾರು ಜನರ ಹೋರಾಟದಿಂದ ತುಂಗಭದ್ರಾ ನದಿಯಿಂದ ತಾಲ್ಲೂಕಿಗೆ ಹರಿಸಲಾಗುತ್ತಿದೆ. ಇದೇ ರೀತಿ ತಾಲ್ಲೂಕಿನ ಕೆರೆಗಳಿಗೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಮೂಲಕ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಬೆಟ್ಟ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಅಭಿವೃದ್ಧಿ ವಿಚಾರಗಳಿಗೆ ಸದಾ ಬೆಂಬಲ ನೀಡಲಾಗುವುದು. ನೀರಾವರಿ ಯೋಜನೆಗಳ ಅನುಷ್ಠಾನವಾಗಬೇಕು ಎಂದರು. ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿದರು. ಸಿದ್ದಾಪುರ ರಾಮಮೂರ್ತಿ ಸ್ವಾಮೀಜಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ ಅಂಜಿನಪ್ಪ, ತಿಮ್ಮಾರೆಡ್ಡಿ, ಎನ್.ಎ ಈರಣ್ಣ, ಬಾಲಮ್ಮನಹಳ್ಳಿ ಸೂರ್ಯ ನಾರಾಯಣ್, ಕಡಮಲಕುಂಟೆ ಬಡಪ್ಪ, ರಾಮಾಂಜಿನಪ್ಪ, ಅಲ್ಕುಂದಿ, ರಘು, ಬೇಕರಿ ನಾಗರಾಜು, ಮನು ಮಹೇಶ್, ಬ್ಯಾಡನೂರು ಶಿವು, ಕಾವಲಗೆರೆ ರಾಮಾಂಜಿ, ಪಾಳೆಗಾರ್ ಲೋಕೇಶ್, ನಲಿಗಾನಹಳ್ಳಿ ಮಂಜುನಾಥ್, ಚಂದ್ರಶೇಖರರೆಡ್ಡಿ, ಬಲರಾಮ್ ಇನ್ನು ಮುಂತಾದವರು ಇದ್ದರು.