
ಚಿಕ್ಕಬಳ್ಳಾಪುರ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜನಪದ ಉತ್ಸವ ಮತ್ತು ಸಾಂಸ್ಕೃತಿಕ ಹಬ್ಬ ಗಮನ ಸೆಳೆಯಿತು. ಕಾಲೇಜಿನ ಸಾಂಸ್ಕೃತಿಕ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಉತ್ಸವದ ಹಿನ್ನೆಲೆಯಲ್ಲಿ ಕಾಲೇಜಿನ ಆವರಣದಲ್ಲಿ ಜನಪದ ಲೋಕವನ್ನೇ ಸೃಷ್ಟಿಸಲಾಗಿತ್ತು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು. ಕಾಲೇಜಿನ ಮುಂಭಾಗ ಚಪ್ಪರ ಹಾಕಿ ರಾಗಿ, ಭತ್ತ, ಜೋಳ, ಅವರೆ, ತೊಗರಿ, ಹುರುಳಿ ಇತ್ಯಾದಿ ಆಹಾರ ಧಾನ್ಯ, ತೆಂಗು, ಅಡಿಕೆ ಜೊತೆಗೆ ಪೂರ್ವಜರು ಬಳಸುತ್ತಿದ್ದ ಬಾವಿ, ಒನಕೆ, ಬೀಸುವ ಕಲ್ಲು, ರುಬ್ಬು ಗುಂಡು, ಮಣ್ಣಿನ ಒಲೆ, ಮಡಕೆಗಳು ಗುಡಿಸಲ ಮಾದರಿಗಳನ್ನು ಇರಿಸಲಾಗಿತ್ತು.
ಹೋಳಿ ಹುಣ್ಣಿಮೆಯ ಚಂದ್ರಮನ ಆಚರಣೆ, ಸಂಕ್ರಾಂತಿ ಆಚರಣೆ ರೂಪಿಸಲಾಗಿತ್ತು. ವಿದ್ಯಾರ್ಥಿಗಳು ಬಳೇಗಾರ, ಕಣಿ ಹೇಳುವ ಜೋಗತಿ, ವೀರಗಾಸೆಯ ವೀರಭದ್ರ ಹೀಗೆ ನಾನಾ ವೇಷ ತೊಟ್ಟಿದ್ದರು. ಯುವತಿಗೆ ಯುವಕನ ಪೋಷಾಕು ಹಾಕಿ ಅಣಕು ಮದುವೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅವರನ್ನು ನಗರದ ಅಂಬೇಡ್ಕರ್ ವೃತ್ತದಿಂದ ಜನಪದದ ಸೊಗಡಿನೊಂದಿಗೆ ಶೃಂಗಾರ ಮಾಡಿದ ಎತ್ತಿನ ಬಂಡಿಯಲ್ಲಿ ಡೋಲು, ನಗಾರಿಯೊಂದಿಗೆ ಕರೆ ತರಲಾಯಿತು. ವಿದ್ಯಾರ್ಥಿ ನಂದೀಶ್ ಅರೇವಾದ್ಯ ನುಡಿಸಿದರು. ಕೋಲಾಟ ಮತ್ತು ಎನ್ ಸಿಸಿ ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ ಇತ್ಯಾದಿ ಜನಪದ ಕಲಾತಂಡಗಳೊಂದಿಗೆ ವೇದಿಕೆಗೆ ಕರೆತರಲಾಯಿತು.

j3tvkannada
ಮೆರವಣಿಗೆಯ ಉದ್ದಕ್ಕೂ ತಮಟೆ, ಡೋಲು, ವಾದ್ಯಗಳ ತಾಳಕ್ಕೆ ವಿದ್ಯಾರ್ಥಿಗಳು,ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರೊಂದಿಗೆ ಕೋಲಾಟದ ಹಾಡಿಗೆ ನೃತ್ಯ ಮಾಡಿದರು. ಕಾಲೇಜಿನ ಆಡಳಿತ ಕಚೇರಿಯ ಸಿಬ್ಬಂದಿ ವಿವಿಧ ಸಾಂಸ್ಕೃತಿಕ ಹಬ್ಬಗಳನ್ನು ಒಪ್ಪವಾಗಿ ಅಲಂಕರಿಸಿ ಗಮನ ಸೆಳೆದರು. ದಸರಾ ಹಬ್ಬದ ಆಚರಣೆಯ ಪ್ರತಿರೂಪವಾಗಿ ವೈವಿಧ್ಯಮಯ ಗೊಂಬೆಗಳನ್ನು ಜೋಡಿಸಿದ್ದರು. ವಿವಿಧ ಗ್ರಾಮಗಳಿಂದ ಅಮ್ಮನವರ ವಿಗ್ರಹಗಳನ್ನು ಉತ್ಸವ ಮೂರ್ತಿಗಳನ್ನು ತಂದು ಒಪ್ಪವಾಗಿ ಅಲಂಕರಿಸಿದ್ದರು. ದಸರಾ ಬೊಂಬೆ ಪೂಜೆ ಮತ್ತು ನವರಾತ್ರಿ ದುರ್ಗಾ ಪೂಜೆ ನೆನಪಿಸುವಂತೆ ಅಲಂಕರಿಸಿದ್ದರು. ಕೃಷ್ಣಾಷ್ಟಮಿ, ದೀಪಾವಳಿ ಆಚರಣೆಯ ಪ್ರತಿರೂಪಗಳನ್ನು ಸೃಷ್ಟಿಸಲಾಗಿತ್ತು. ಕಾಲೇಜಿನ ಸಿಬ್ಬಂದಿ ಅರ್ಚನಾ, ಸಹಾಯಕರಾದ ಚಂದ್ರು, ಸುರೇಶ್, ಹನುಮಂತಪ್ಪ, ನಾಗೇಶ್ ಮತ್ತಿತರರ ಈ ಗಮನ ಸೆಳೆಯುವ ಕಾರ್ಯದ ನೇತೃತ್ವವಹಿಸಿದ್ದರು. ರಾಗಿ, ಭತ್ತ ಹಾಗೂ ಆಹಾರ ಧಾನ್ಯಗಳ ರಾಶಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜನಪದ ಗೀತೆಗಳು, ಕಲಾ ನೃತ್ಯಗಳು, ಸೋಬಾನೆ ಪದಗಳು, ಹರಿಕಥೆಗಳು ಮತ್ತಿತರ ಜನಪದ ಕಲೆಗಳು ಈ ಮಣ್ಣಿನ ಸಂಸ್ಕೃತಿಯಲ್ಲಿವೆ.

j3tvkannada
ಇಂದಿನ ಯುವಸಮೂಹ ಇವನ್ನು ಕಲಿಯುವ ಮೂಲಕ ಜನಪದ ಸೊಗಡನ್ನು ಉಳಿಸುವಲ್ಲಿ ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಜನಪದ ಹಾಗೂ ದೇಸಿ ಸಂಸ್ಕೃತಿಯ ಮಹತ್ವ ಅರಿಯಬೇಕಿದೆ. ಓದಿನ ಜೊತೆಯಲ್ಲಿ ಕಲೆಗಳನ್ನು ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಉತ್ತಮ ಮನ್ನಣೆ ಪಡೆಯಲು ಸಾಧ್ಯ ಎಂದರು. ನಮ್ಮ ಸಂಸ್ಕೃತಿಯ ಜೀವಂತಿಕೆ ಉಳಿಸುವ ಶಕ್ತಿ ಇರುವುದು ಜಾನಪದ ಸಾಹಿತ್ಯಕ್ಕೆ ಮಾತ್ರ. ಜನಪದ ಹಾಡುಗಳು ಮನುಷ್ಯನ ಜೀವನ ಮತ್ತು ಪರಿಸರದ ಸೊಗಡನ್ನು ಪ್ರತಿಬಿಂಬಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತೆವೆ ಎಂದು ಹೇಳಿದರು. ನೆಲ-ಜಲ, ಮನುಷ್ಯನ ಹಾವ-ಭಾವ, ಪ್ರಕೃತಿಯ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ಜಾನಪದ ಸಾಹಿತ್ಯದಲ್ಲಿ ನಮ್ಮ ಹಿರಿಯರು ರಚಿಸಿದ್ದಾರೆ. ಎಲ್ಲ ಸಾಹಿತ್ಯದ ಮೂಲ ಬೇರು ಜನಪದ ಹಾಡುಗಳಾಗಿವೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜನಪದ ತಾಯಿಬೇರು ಪ್ರಾಂಶುಪಾಲ ಮುನಿರಾಜು ಮಾತನಾಡಿ ಜನಪದ ಸೊಗಡಿನಲ್ಲೇ ಭಾರತೀಯ ಮೂಲ ಪರಂಪರೆಯ ಸತ್ಯ ಅಡಗಿದೆ. ಆಧುನಿಕತೆ ಭರಾಟೆಯ ನಡುವೆಯೇ ಜನಪದ ಸಂಸ್ಕೃತಿಯನ್ನು ಉಳಿಸಬೇಕು. ಜನಪದ ಸಂಸ್ಕೃತಿ ನಮ್ಮ ತಾಯಿಬೇರು ಎಂದರು.