ಕಲಬುರಗಿ: ನಗರದ ಮಹಾದೇವಿ ಕಾಲೋನಿಯಲ್ಲಿ ವಾಸವಾಗಿರುವ ರಾಕೇಶ್ ಬಿರಾದಾರ್ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಯಡ್ರಾಮಿ ತಾಲೂಕಿನ ಕುಳಗೇರಿ ಗ್ರಾಮದ ಮೇಘಾ ಜೊತೆ ಕಳೆದ ಮೂರು ತಿಂಗಳ ಹಿಂದೆ ಅದ್ದೂರಿಯಾಗಿ ಮದ್ವೆಯಾಗಿತ್ತು. ಕೇವಲ ಮೂರೇ ಮೂರು ತಿಂಗಳಲ್ಲೇ ರಾಕೇಶ್ ಮತ್ತು ಮೇಘಾ ಅವರ ದಾಂಪತ್ಯ ಜೀವನ ಮುಗಿದೇ ಹೋಯಿತು ನೋಡಿ.

ಅತ್ತೆ ಮಾವನಿಗೆ ಅಡುಗೆ ಮಾಡಲು ಆಗಲ್ಲ ಅಂತಾ ಮೇಘಾಳಿಂದ ನಿತ್ಯವೂ ಕಿರುಕುಳ ಉಂಟಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಮೇಘಾ ಹಾಗೂ ಅವರ ತಾಯಿ ರೇಣುಕಾ ಮತ್ತು ಸಹೋದರಿ ಪ್ರಿಯಾಂಕಾ ಈ ಮೂರು ಜನ ಸೇರಿಕೊಂಡು ರಾಕೇಶ್ ತಂದೆ ತಾಯಿಗೆ ಜೀವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಇದರಿಂದ ಮನನೊಂದು ರಾಕೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಕೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.