
ತುಮಕೂರು : ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುನ್ನಡೆದಿದ್ದು, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಭಿಪ್ರಾಯಪಟ್ಟರು. ‘ಕಲ್ಪವೃಕ್ಷ’ ಸಭಾಂಗಣವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ತಾಂತ್ರಿಕ ಪದವಿ ನೀಡುವಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವಲ್ಲೂ ರಾಜ್ಯ ಮುಂದಿದ್ದು, ನಾಸಾದಲ್ಲಿ ಶೇ 20ರಷ್ಟು ಭಾರತದ ವಿಜ್ಞಾನಿಗಳಿದ್ದಾರೆ. ಹಾಗಾಗಿ ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಗುರುತಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜವಾಹರ್ಲಾಲ್ ನೆಹರೂ ಉದ್ಘಾಟಿಸಿರುವ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಾವಿರಾರು ಯುವಕರಿಗೆ ಭವಿಷ್ಯ ಕಲ್ಪಿಸಿದೆ ಎಂದರು.

ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 1.50 ಲಕ್ಷ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, 60 ಸಾವಿರ ಮಂದಿ ದಾಖಲಾಗುತ್ತಿದ್ದಾರೆ. ತಕ್ಷಣಕ್ಕೆ ಕೆಲಸ ಸಿಗುವ ಕೋರ್ಸ್ ಆಗಿರುವುದರಿಂದ ಆಸಕ್ತಿ ತೋರಬೇಕು ಎಂದು ಹೇಳಿದರು. ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ವಿದ್ಯೆ ಬದುಕಿಗೆ ಬೆಳಕು ತೋರುವ ಶಕ್ತಿ. ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಯ ಬಗ್ಗೆ ತೋರಿದ ಬದ್ಧತೆ ನಿಜಕ್ಕೂ ಪ್ರೇರಣಾದಾಯಕ. ಶ್ರಮ, ನಿಷ್ಠೆ, ಗುರು ಭಕ್ತಿಯಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು. ಸ್ವಾಮಿ ವೀರೇಶಾನಂದ, ತಾಂತ್ರಿಕ ವಿದ್ಯೆ ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ. ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗವೂ ಆಗಬೇಕು ಎಂದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಕಾಲೇಜು ಪ್ರಾಂಶುಪಾಲ ಅನಿಲ್ ಕುಮಾರ್, ಜಿ.ಪಿ.ಟಿ ಹಳೆಯ ವಿದ್ಯಾರ್ಥಿಗಳ ಸಂಘದ ಸಂಸ್ಥಾಪಕ ಸಿ.ಎಸ್.ಪ್ರಕಾಶ್, ಅಧ್ಯಕ್ಷ ಎನ್.ಗೋಪಾಲಕೃಷ್ಣ, ಕಾರ್ಯದರ್ಶಿ ಸಿ.ಎಸ್.ರಮೇಶ್, ಡಿಸಾ ಇಂಡಿಯಾ ಉಪಾಧ್ಯಕ್ಷ ಸ್ಟೇಪಿಸ್ ಉದಯ್ ಕುಮಾರ್ ಉಪಸ್ಥಿತರಿದ್ದರು.