
ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ಶಿಬಿರ ಆಯೋಜನೆ ಉತ್ತಮ ಚಟುವಟಿಕೆ. ಮಜಾ ಮೋಜು ಮಸ್ತಿಗಳೊಂದಿಗೆ ಕಲಿಕೆ ಸುಲಭ ಸುಸೂತ್ರ ಎನ್ನುವುದು ಇಂತಹ ಶಿಬಿರಗಳಿಂದ ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಹೇಳಿದರು.

j3tvkannada
ಐರೋಡಿ ಗ್ರಾಮದ ಗೋಳಿಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಈಚೆಗೆ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಇಂತಹ ಕಾರ್ಯಕ್ರಮ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡು ಪ್ರತಿಭೆಗಳನ್ನು ಅನಾವರಣಗೊಳಿಸಿ ಎಂದರು. ಹಂಗಾರಕಟ್ಟೆ ಶಾಲೆ ಎಸ್ಡಿಎಂಸಿ ಅಧ್ಯಕ್ಷೆ ಪೂರ್ಣಿಮಾ ಸತೀಶ ಅಧ್ಯಕ್ಷತೆ ವಹಿಸಿದ್ದರು. ಐರೋಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಧಾಕರ ಪೂಜಾರಿ, ನವೀನ ಕಾರಂತ, ವಲಯ ಸಂಪನ್ಮೂಲ ಕೇಂದ್ರದ ಸುರೇಶ ಕುಂದರ್, ಟಿಪಿಒ ನಿತ್ಯಾನಂದ ಶೆಟ್ಟಿ, ಸಿಆರ್ಪಿ ಮಾಲಿನಿ ಎಂ, ರಂಗ ಕಲಾವಿದರಾದ ಗೋಪಾಲ ಮಡಿವಾಳ, ರಘುರಾಮ ಪೂಜಾರಿ, ಅನ್ನೋನ್ಯತಾ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ವಿಜಯ ಪೂಜಾರಿ ಭಾಗವಹಿಸಿದ್ದರು. ಪ್ರಭಾರ ಮುಖ್ಯ ಶಿಕ್ಷಕ ಮಹೇಶ ಮೊಗೇರ ಸ್ವಾಗತಿಸಿದರು. ಸಹ ಶಿಕ್ಷಕಿ ಭವಾನಿ ನಿರೂಪಿಸಿದರು. ಅತಿಥಿ ಶಿಕ್ಷಕಿ ಅಕ್ಷತಾ ವಂದಿಸಿದರು.