
ಬೀದರ್ : ಮಹಾದೇವ ಬಾರ್ಸಿ ದ್ವಿತೀಯ ಜಾತ್ರಾ ಮಹೋತ್ಸವ ಪ್ರಯುಕ್ತ ಬೀದರ್ ತಾಲ್ಲೂಕಿನ ಜನವಾಡದಲ್ಲಿ ಬುಧವಾರ ಸಂಭ್ರಮದ ಮಧ್ಯೆ ಮಹಾದೇವ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪಾಂಡುರಂಗ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಹಾಯ್ದು ಶಿವ ಪಾರ್ವತಿ ಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು.ಅಲಂಕೃತ ಪಲ್ಲಕ್ಕಿಯಲ್ಲಿ ಮಹಾದೇವ ಮೂರ್ತಿ, ಲಿಂಗ, ಟ್ರ್ಯಾಕ್ಟರ್ನಲ್ಲಿ ಶಿವ ಪಾರ್ವತಿಯ ಭಾವಚಿತ್ರ ಇಡಲಾಗಿತ್ತು. ಧ್ವನಿ ವರ್ಧಕದಲ್ಲಿ ಓಂ ನಮಃ ಶಿವಾಯ ಮಂತ್ರ ಮೊಳಗಿತು. ಕುಂಭ ಕಳಸ ಹೊತ್ತ ಮಹಿಳೆಯರು, ಬ್ಯಾಂಡ್ ಬಾಜಾ, ಕೋಲಾಟ, ಭಜನಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು. ಬೇಮಳಖೇಡದ ರಾಜಶೇಖರ ಶಿವಾಚಾರ್ಯ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಶಿವ ಪಾರ್ವತಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸವರಾಜ ಸ್ವಾಮಿ, ಪೂಜಾರಿ ಶಿವಕುಮಾರ ಸ್ವಾಮಿ, ರಾಜಕುಮಾರ ಚಲವಾ, ಶರಣಯ್ಯ ಸ್ವಾಮಿ, ಸಂತೋಷ ಕೊಠಾಳೆ, ವಿಜಯಕುಮಾರ ಬಿರಾದಾರ, ಬಲಭೀಮರಾವ್ ಕಚರೆ, ಶಿವಾಜಿರಾವ್ ಶೇರಿಕಾರ್, ಬಸವರಾಜ ಚಾಪ್ಪೆ, ಜಗನ್ನಾಥ ಎಚ್., ಸಿದ್ರಾಮ ಗುಮ್ಮೆ, ಸಚಿನ್ ಚಲವಾ, ಕೃಷ್ಣ ಪಾಂಡ್ರೆ ಮೊದಲಾದವರು ಪಾಲ್ಗೊಂಡಿದ್ದರು.

ಮುಂದಿನ ವರ್ಷ ಮಹಾದೇವ ಬಾರ್ಸಿ ಜಾತ್ರಾ ಮಹೋತ್ಸವದಲ್ಲಿ ಮಹಾ ರಥೋತ್ಸವ ನೆರವೇರಿಸಲಾಗುವುದು ಎಂದು ಬೇಮಳಖೇಡದ ರಾಜಶೇಖರ ಶಿವಾಚಾರ್ಯ ಹೇಳಿದರು. ಮಹಾದೇವ ಬಾರ್ಸಿ ದ್ವಿತೀಯ ಜಾತ್ರಾ ಮಹೋತ್ಸವ ನಿಮಿತ್ತ ಜನವಾಡದ ಶಿವ ಪಾರ್ವತಿ ಮಂದಿರದಲ್ಲಿ ನಡೆದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ಜಾತ್ರೆಗಳು ಗ್ರಾಮೀಣ ಭಾರತದ ಭಾವೈಕ್ಯದ ಪ್ರತೀಕವಾಗಿವೆ. ಸಾಂಸಾರಿಕ ತಾಪತ್ರಯಗಳ ನೋವು ಕಳೆದು ನೆಮ್ಮದಿ, ಸಂತಸ ನೀಡುತ್ತವೆ. ಜೀವನೋತ್ಸಾಹ ಮೂಡಿಸುತ್ತವೆ ಎಂದು ತಿಳಿಸಿದರು. ದೇಶದಲ್ಲಿ ಪುರಾತನ ಕಾಲದಿಂದಲೂ ಮಹಾದೇವ ಬಾರ್ಸಿಯಂದು ಶಿವ ಪಾರ್ವತಿ ಕಲ್ಯಾಣ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳು ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ನಂತರ ಶಿವ ಪಾರ್ವತಿ ವಿವಾಹ ಮಹೋತ್ಸವ, ಹೆಸರಾಂತ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿದವು. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡರು.