ಗದಗ: ಇತ್ತೀಚೆಗೆ ಎಲ್ಲಿ ನೋಡಿದರೂ ಆಕ್ಸಿಡೆಂಟ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಬೈಕಲ್ಲಿ ಇಬ್ಬರು ಹೋಗುವ ಬದಲು ಮೂವರೂ ಪ್ರಯಾಣಿಸುತ್ತಾರೆ. ರೂಲ್ಸ್ ಬ್ರೇಕ್ ಮಾಡಿ ಪ್ರಾಣಕ್ಕೆ ಕುತ್ತು ತಂದುಕೊಳ್ಳೂತ್ತಾರೆ. ಅಜಾಗರೂಕತೆಯ ಚಾಲನೆಯೇ ಕೆಲವೊಮ್ಮೆ ಅಪಘಾತಕ್ಕೆ ಕಾರಣವಾಗುತ್ತದೆ. ನಿನ್ನೆ ತಡರಾತ್ರಿ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೂರು ಜನ ಒಂದೇ ಬೈಕ್ ನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ನಿಂಗಪ್ಪ ಮಾದರ 35 ವರ್ಷ ಹಾಗೂ ಯಮನಪ್ಪ ಮಾದರ 45 ವರ್ಷ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಗಾಯಾಳು ಮಂಜುನಾಥಗೌಡ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತರು ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಅಪಘಾತವಾದ ನಂತರ ಅಪರಿಚಿತ ವಾಹನದ ಸಮೇತ ಚಾಲಕ ಪರಾರಿಯಾಗಿದ್ದಾನೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತನಿಖೆ ಮುಂದುವರೆದಿದೆ.