ತುಮಕೂರು: ತುಮಕೂರು ನಗರದ ಮರಳೂರು ದಿನ್ನೆಯಲ್ಲಿರುವ ಜಿಲ್ಲಾ ಬಂಜಾರ ಭವನದಲ್ಲಿ ಬಂಜಾರ ಜಾಗೃತಿ ವೇದಿಕೆ ವತಿಯಿಂದ ಸಂತ ಸೇವಾಲಾಲ್ ಮಹಾರಾಜರ 286 ನೇ ಜಯಂತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಿಗ್ಬಾಸ್ ಖ್ಯಾತಿಯ ಹನುಮಂತ ಅವರು ಟೌನ್ ಹಾಲ್ ವೃತ್ತದಿಂದ ಜಿಲ್ಲಾ ಬಂಜಾರ ಭವನಕ್ಕೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಆಗಮಿಸಿದ್ದರು. ಹನುಮಂತನ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.

ಬಂಜಾರ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ತಿಪ್ಪಾ ಸರ್ ನಾಯ್ಕ್ ಅವರು ಮಾತಾನಾಡಿ, ನಾವು ಬಹಳ ಹಿಂದೆ ಇದ್ದೇವೆ. ಕಾಡು ಗುಡ್ಡಗಳಲ್ಲಿ ಹೊಟ್ಟೆಗಾಗಿ ಊರಿಂದೂರಿಗೆ ವಲಸೆ ಬಂದು ಕೆಲಸ ಮಾಡುತಿದ್ದಾರೆ. ಇಂತಹ ಸಮಾಜದ ಜನರು ಮುಖ್ಯವಾಹಿನಿಗೆ ಬರಲು ಕೆಲಸ ಮಾಡಬೇಕು. ಒಳಮೀಸಲಾತಿ ಜಾರಿಗೆ ತರುವ ಹುನ್ನಾರ ಮಾಡಬಾರದು. ಈ ಹಿಂದೆ ನಡೆಸಿದ ಜಾತಿ ಜನಗಣತಿ ಅವೈಜ್ಞಾನಿಕವಾಗಿದೆ, ಈಗ ಒಳಮೀಸಲಾತಿ ಜಾರಿಗೆ ತರುವ ಮುನ್ನ ವೈಜ್ಞಾನಿಕವಾಗಿ ಜಾತಿ ಜನಗಣತಿ ಮಾಡಿ ನಂತರ ಒಳ ಮೀಸಲಾತಿ ಮಾಡಲಿ. ಭಾರತದಲ್ಲಿ ನಮ್ಮ ಜನಾಂಗದಲ್ಲಿ ಸುಮಾರು ಹತ್ತು ಕೋಟಿಗೂ ಹೆಚ್ಚು ಜನರು ಇದ್ದಾರೆ. ಕರ್ನಾಟಕದಲ್ಲಿ ಸುಮಾರು ನಲವತ್ತು ಲಕ್ಷ ಜನ ಸಂಖ್ಯೆ ಹೊಂದಿರುವ ಜನಾಂಗದವರನ್ನು ಕಡೆಗಣಿಸದಿರಿ ಎಂದು ಹೇಳಿದರು. ಲಂಬಾಣಿ ಜನಾಂಗದವರು ಸ್ವಾಭಿಮಾನ ಬಿಟ್ಟು ಎಂದೂ ಬಾಳಿದವರಲ್ಲ. ಇಂದು ಸಾಕಷ್ಟು ಮಂದಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದಾರೆ, ಆದರೂ ಅದು ಬೆರಳೆಣಿಕೆಯಷ್ಟು ಮಾತ್ರ ಎಂದು ಬಿಗ್ ಬಾಸ್ ಖ್ಯಾತಿಯ ಹನುಮಂತ ಅವರು ತಿಳಿಸಿದರು.