
ಮೈಸೂರು: ಜಯಪುರ ಗ್ರಾಮದ, ಗೋಪಾಲಪುರದಲ್ಲಿ ದರೋಡೆ ಪ್ರಕರಣದ ಸ್ಥಳ ಮಹಜರು ವೇಳೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಎಂ.ಆದರ್ಶ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ಮುಸುಕುಧಾರಿಗಳ ತಂಡವೊಂದು ಮೈಸೂರು- ಮಾನಂದವಾಡಿ ಹೆದ್ದಾರಿಯಲ್ಲಿ ಕೇರಳ ಉದ್ಯಮಿಯೊಬ್ಬರ ಕಾರು ಅಡ್ಡಗಟ್ಟಿ ದರೋಡೆ ಮಾಡಿ, ಗೋಪಾಲಪುರದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಆರೋಪಿಗಳಾದ ಎಂ.ಆದರ್ಶ್, ವಿಜೇಶ್, ಶ್ರೀಜಿತ್ ಅವರನ್ನು ಶುಕ್ರವಾರ ಬಂಧಿಸಿದ್ದ ಪೊಲೀಸರು, ಕಾರು ಪತ್ತೆಯಾದ ಸ್ಥಳದ ಪರಿಶೀಲನೆಗಾಗಿ ಗ್ರಾಮಕ್ಕೆ ಕರೆದೊಯ್ದಿದ್ದರು. ಈ ವೇಳೆ ಮೂತ್ರ ವಿಸರ್ಜನೆ ನೆಪದಲ್ಲಿ ಸ್ಥಳದಿಂದ ದೂರ ಹೋದ ಆದರ್ಶ್, ಜೊತೆಗಿದ್ದ ಪಿಎಸ್ಐ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೆ ಸಿಪಿಐ ಶಿವನಂಜ ಶೆಟ್ಟಿ ಗಾಳಿಯಲ್ಲಿ ಗುಂಡು ಹಾರಿಸಿದರು. ನಂತರ ಮತ್ತೊಬ್ಬ ಸಿಪಿಐ ದೀಪಕ್ ರವರು, ಓಡಲು ಪ್ರಯತಿಸಿದ ಆರೋಪಿ ಆದರ್ಶ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳು ಪೊಲೀಸ್ ಹಾಗೂ ಆರೋಪಿ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.