

ಮಂಡ್ಯ : ‘ಸಮಾಜದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ’ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಬಿ. ರಾಜಶೇಖರ ಮೂರ್ತಿ ಬೇಸರ ವ್ಯಕ್ತಪಡಿಸಿದರು. ತಾಲ್ಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದಲ್ಲಿ ಭಾನುವಾರ ಗ್ರಾಮೀಣ ದಲಿತರ ಬದುಕಿನ ಅಧ್ಯಯನ ಕಾರ್ಯಕ್ರಮದ ಅಂಗವಾಗಿ ನಡೆದ ಸಮಾಲೋಚನಾ ಸಭೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ದಲಿತರಲ್ಲಿ ಶೇ 9 ಜನರಿಗೆ ಮಾತ್ರ ಭೂಮಿಯಿದೆ. ದಲಿತರಿಗೆ ಶಿಕ್ಷಣ ಸಿಗಬೇಕು, ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಎಷ್ಟೋ ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಮೇಲ್ವರ್ಗದಲ್ಲಿನ ಕೆಲವರ ಮನೆಗೆ ಇಂದಿಗೂ ಸೇರಿಸುತ್ತಿಲ್ಲ’ ಎಂದು ಹೇಳಿದರು. “ಹಳ್ಳಿಗಳಲ್ಲಿ ಹೋಟೆಲ್ಗೆ ಹೋಗಿ ಟೀ ಕುಡಿದರೂ 2 ಲೋಟಗಳ ಸಿಸ್ಟಮ್ ಇದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಊಟ ಮಾಡುವಾಗಲೂ ಎಷ್ಟೋ ಗ್ರಾಮಗಳಲ್ಲಿ ಒಟ್ಟಿಗೆ ಕೂರಿಸುತ್ತಿಲ್ಲ. ಈಗಲೂ ಎಷ್ಟೋ ಕಡೆ ಮುಜರಾಯಿ ದೇವಸ್ಥಾನಗಳಿಗೆ ದಲಿತರು ಹೋಗುತ್ತಿಲ್ಲ ಅಂಥ ವಾತಾವರಣವಿದೆ’ ಎಂದರು. ‘ರಾಜ್ಯ ಸರ್ಕಾರವು ಎಸ್.ಸಿ, ಎಸ್.ಟಿ ಜನರ ಅಭಿವೃದ್ಧಿಗೆ ಮೀಸಲಾಗಿಡುವ ಯೋಜನೆಗಳ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದು, ಅದು ಆಗಬಾರದು. ಬದಲಾಗಿ ಆ ಹಣದಲ್ಲಿ ಮನೆಯಿಲ್ಲದವರಿಗೆ ಮನೆ, ಶಿಕ್ಷಣಕ್ಕೆ ನೆರವು, ಸ್ವ-ಉದ್ಯೋಗಕ್ಕೆ ನೀಡಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ನಂತರ ತಾಲ್ಲೂಕಿನ ಯರಗನಹಳ್ಳಿ, ಬಸವನಪುರ, ಮಲ್ಲಯ್ಯನಗರ, ಗೆಜ್ಜಲಗೆರೆ ಕಾಲೋನಿಗಳಲ್ಲಿ ಸಮಾಲೋಚನೆ ಸಭೆಗಳನ್ನು ನಡೆಸಲಾಯಿತು. ಈ ವೇಳೆ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ಕೆಲವರು ಮನವಿ ಸಲ್ಲಿಸಿದರು. ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಕೃಷ್ಣ, ಜಿಲ್ಲಾ ಕಾರ್ಯದರ್ಶಿ ಅಂಭೂಜಿ, ಗಿರಿಜಮ್ಮ, ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಸ್.ಶಿವಲಿಂಗಯ್ಯ, ಧನಂಜಯ, ಮುಖಂಡರಾದ ಮಹೇಶ್ ಹಾಜರಿದ್ದರು.