
ಯಾದಗಿರಿ: ಮಕ್ಕಳಿಗೆ ಅಕ್ಷರ ಕಲಿಸುವ ಜತೆಗೆ ಪರಿಸರ ಜಾಗೃತಿ ಮೂಡಿಸಬೇಕು ಎಂಬ ಸಂಕಲ್ಪ ನಮ್ಮ ಸಂಸ್ಥೆಯದ್ದಾಗಿದೆ ಎಂದು ಮುಖ್ಯಗುರು ಲಕ್ಷ್ಮಣಕೆ ಗುಡೂರು ತಿಳಿಸಿದರು. ತಾಲೂಕಿನ ಗುಡೂರು ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾದ ರೇನ್ ಬೋ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ರೇನ್ ಬೋ ಶಾಲೆಯ ಮಕ್ಕಳಿಗೆ ವಿಶೇಷವಾಗಿ ಪರಿಸರ ಕಾಳಜಿ ಬೆಳೆಸಬೇಕು ಎಂಬ ಗುರಿ ನಮ್ಮದು. ಇದಕ್ಕಾಗಿ ವಿಶಾಲ ಆವರಣವನ್ನು ಒಳಗೊಂಡ ಬಯಲು ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರ ಸುತ್ತಲೂ ಸುಮಾರು ೩೦೦ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಇದರಿಂದ ಭವಿಷ್ಯದಲ್ಲಿ ಶಾಲಾವರಣ ಹಸಿರಿನಿಂದ ಕಂಗೊಳಿಸಲಿದ್ದು, ಮಕ್ಕಳ ಕಲಿಕೆಗೆ ಅತ್ಯಂತ ಸೂಕ್ತ ಶೈಕ್ಷಣಿಕ ಕೇಂದ್ರವಾಗಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಭೂತಾಯಿಗೆ ಪೂಜೆ ಸಲ್ಲಿಸಿದ ರೇನ್ ಬೋ ಶಾಲೆಯ ಪುಟಾಣಿ ಮಕ್ಕಳು ಸಸಿಗಳಿಗೆ ನೀರೆರೆಯುವ ಮೂಲಕ ಪರಿಸರ ದಿನಾಚರಣೆ ಮಾಡಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಕಾಮಣ್ಣ ಕಾಮಣ್ಣೋರ, ಶಿಕ್ಷಕರಾದ ನಾಗಪ್ಪ, ಶಿವಲಿಂಗಮ್ಮ, ಅರುಣಿಮಾ, ಶ್ವೇತಾ, ಶ್ರೀಮಾ ಸೇರಿದಂತೆ ಗ್ರಾಮದ ಮುಖಂಡರಾದ ರಾಜು ಕಾಮಣ್ಣೋರ, ಮಲ್ಲು ಪೂಜಾರಿ, ಪಿಡ್ಡಪ್ಪ ಪೂಜಾರಿ, ಶಿವರಾಜ ಗಣಪುರ, ಶಬ್ಬೀರ್, ಮಹ್ಮದ ಪಟೇಲ್, ಹಣಮಂತ ಸಂಗವಾರ, ಶಮೀರ ಪಟೇಲ್ ಹಾಗೂ ಶಾಲಾ ಮಕ್ಕಳು ಇದ್ದರು.