
ಚಿತ್ರದುರ್ಗ: ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಜರುಗಿತು, ಇದರಲ್ಲಿ 5 ಅಂತರ್ಜಾತಿ ಸೇರಿ 26 ಜೋಡಿಗಳು ದಾಂಪತ್ಯಕ್ಕೆ ಪದಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಭಾಗವಹಿಸಿ ಮಾತನಾಡಿ, ಐತಿಹಾಸಿಕ ಮುರುಘಾ ಮಠದ ಕಳೆದ 35 ವರ್ಷಗಳಿಂದ ಸಾಮೂಹಿಕ ವಿವಾಹ, ಸಾಮಾಜಿಕ ಕಾರ್ಯಗಳ ಜೊತೆಗೆ ಅನ್ನ, ಅಕ್ಷರ ದಾಸೋಹ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ವಿವಾಹಗಳ ಮೂಲಕ ದುಂದುವೆಚ್ಚ ಮಾಡುವುದನ್ನು ತಪ್ಪಿಸಲು ಶ್ರೀಮಠ ಈ ರೀತಿಯ ಕಾರ್ಯವನ್ನು ಮಾಡುತ್ತಿದೆ. ನವ ವಧುವರರು ಜೀವನದುದ್ದಕ್ಕು ಹೊಂದಿಕೊಂಡು ಹೋಗುತ್ತೇವೆಂದು ಸಂಕಲ್ಪ ಮಾಡಿ ನೆಮ್ಮದಿ ಬದುಕನ್ನು ಸಾಗಿಸಬೇಕೆಂದರು.

ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿ, ಕಳೆದ 35 ವರ್ಷಗಳಿಂದ ಸುಮಾರು 25 ಸಾವಿರ ವಧುವರರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ನವಜೋಡಿಗಳು, ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎನ್ನುವ ಶರಣರ ನುಡಿಯಂತೆ ಸತಿ-ಪತಿಗಳು ಸಂಸಾರದಲ್ಲಿ ಹೊಂದಿಕೊಂಡು ಬದುಕಿನ ಬಾಳ ದೀಪ ಹಚ್ಚಬೇಕು ಎಂದು ಸಲಹೆ ನೀಡಿದರು.
ಅತ್ತೆ-ಸೊಸೆ ಹೊಂದಿಕೊಳ್ಳದಿದ್ದರೆ ಜೀವನವೇ ಅಯೋಮಯ ಆಗುತ್ತದೆ. ಸ್ವರ್ಗ-ನರಕ ಎಲ್ಲಿಯೂ ಇಲ್ಲ. ನಾವೇ ಸೃಷ್ಟಿ ಮಾಡಿಕೊಳ್ಳುವ ರೀತಿ ನೀತಿಯಲ್ಲಿದೆ. ಗಂಡು ಕುರುಡನ ರೀತಿ, ಹೆಣ್ಣು ಮೂಗಿಯ ರೀತಿ ಕಂಡರೂ ಕಾಣದಂತಹ ಮನಸ್ಥಿತಿ ಗಂಡನದಾದರೆ, ಕೇಳಿಯೂ ಕೇಳದಂತೆ ಹೆಣ್ಣಿನ ಮನಸ್ಥಿತಿ ಹೊಂದಿದ್ದರೆ ಅದೇ ಸ್ವರ್ಗ ಆಗುತ್ತದೆ ಎಂದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಮಾತನಾಡಿ, ವಿವಾಹ ಗಟ್ಟಿಯಾಗಿ ನಿಲ್ಲಬೇಕಾದರೆ ಷರತ್ತುಬದ್ಧ ಪ್ರೀತಿ ಇರಬಾರದು. ಸತಿ ಪತಿಯರಲ್ಲಿ ಅಪನಂಬಿಕೆ ಇರಬಾರದು. ಮುಕ್ತ ಮನಸ್ಸಿನಿಂದ ಮಾತನಾಡಬೇಕು.
ಮನೆಯಲ್ಲಿ ಕೆಲ ಕಸಿವಿಸಿಗಳು ಇರುತ್ತವೆ. ಹೆಂಡತಿ ಜೋರಾದಾಗ ಗಂಡ, ಗಂಡ ಜೋರಾದಾಗ ಹೆಂಡತಿ ಸ್ವಲ್ಪ ಸಮಯ ತಾಳ್ಮೆ ವಹಿಸಬೇಕೆಂದು ಕಿವಿಮಾತು ಹೇಳಿದರು. ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಎಲ್ಲ ವಧುವರರು, ಸಂಬಂಧಿಕರು ತಮ್ಮ ಮನೆಗಳ ಮುಂದೆ ಗಿಡ ನೆಡುವ ಮೂಲಕ ಹಸಿರು ಕ್ರಾಂತಿಗೆ ಕಾರಣವಾಗಬೇಕು. ವಿಶ್ವ ಪರಿಸರ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಬೇಕು. ಶ್ರೀಮಠವು ಕಂದಾಚಾರ, ಮೌಢ್ಯವನ್ನು ನಿರಾಕರಿಸಿ ಅಮಾವಾಸ್ಯೆ, ಶೂನ್ಯಮಾಸ, ಆಷಾಡದಲ್ಲೂ ಪ್ರತಿವರ್ಷ ವಿವಾಹಗಳನ್ನು ಮಾಡುತ್ತಿದೆ. ನೂರಾರು ಜೋಡಿಗಳು ಇಂಥ ವಿವಾಹಗಳನ್ನು ಆಗಿದ್ದು, ಅವರೆಲ್ಲರೂ ಸುಖ ಜೀವನದಲ್ಲಿದ್ದಾರೆ ಎಂದರು.

ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಯಶಸ್ಸು, ಸಂಪತ್ತು, ಪ್ರೇಮ ಇವುಗಳಲ್ಲಿ ಪ್ರೇಮ ಮುಖ್ಯ. ಪ್ರೇಮದ ಹಿಂದೆ ಯಶಸ್ಸು, ಸಂಪತ್ತು ಬರುತ್ತದೆ. ಆದ್ದರಿಂದ ನವಜೋಡಿಗಳಲ್ಲಿ ಪ್ರೇಮ ಮುಖ್ಯ. ಪ್ರೀತಿ-ಪ್ರೇಮದಿಂದ ದಾಂಪತ್ಯ ಜೀವನ ನಡೆಸಿದರೆ ಯಶಸ್ಸು ಮತ್ತು ಸಂಪತ್ತು ಬರುತ್ತದೆ. ಸಾಮೂಹಿಕ ಕಲ್ಯಾಣ ಕಾರ್ಯವು ಸಮಾನತೆಯ ಸಾರವಾಗಿ ಕಾಣುತ್ತಿದೆ ಎಂದು ಹೇಳಿದರು.
ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎಸ್.ಎನ್. ಚಂದ್ರಶೇಖರ್, ಡಾ. ಕೆ. ಮಂಜುನಾಥ ನಾಯ್ಕ ವೇದಿಕೆಯಲ್ಲಿದ್ದರು.