
ಬೆಂಗಳೂರು ಗ್ರಾಮಾಂತರ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 54 ಚಿರತೆಗಳು ಕಂಡು ಬಂದಿವೆ. ಹೊಲೆಮತ್ತಿ ನೇಚರ್ ಫೌಂಡೇಶನ್ ನಡೆಸಿದ ಅಧ್ಯಯನದ ಪ್ರಕಾರ, ಬೆಂಗಳೂರು ಹೊರವಲಯದಲ್ಲಿ ಸುಮಾರು 85 ಕಾಡು ಚಿರತೆಗಳಿವೆ ಹಾಗೂ ಹೊರವಲಯದ ಕಾಡುಗಳಲ್ಲಿ 30 ಚಿರತೆಗಳು ಸಂಚರಿಸುತ್ತಿವೆ. ಸಂರಕ್ಷಣಾ ಜೀವಶಾಸ್ತ್ರಜ್ಞ ಮತ್ತು ಚಿರತೆ ತಜ್ಞ ಸಂಜಯ್ ಗುಬ್ಬಿ ನೇತೃತ್ವದಲ್ಲಿ ಹೊಲೆಮತ್ತಿ ನೇಚರ್ ಫೌಂಡೇಶನ್ (HNF) ನಡೆಸಿದ ಒಂದು ವರ್ಷದ ಕ್ಯಾಮೆರಾ ಟ್ರ್ಯಾಪ್ ಅಧ್ಯಯನದ ಪ್ರಕಾರ, ಬೆಂಗಳೂರು ಹೊರವಲಯದ ಅರಣ್ಯಗಳು ಹಾಗೂ ಕಾಡು ಪ್ರದೇಶಗಳು 80 ರಿಂದ 85 ಕಾಡು ಚಿರತೆಗಳಿಗೆ ಆಶ್ರಯ ತಾಣವಾಗಿದೆ ಎಂಬುದು ತಿಳಿದು ಬಂದಿದೆ.

3tvkannada.in
ಈ ಪೈಕಿ 54 ಚಿರತೆಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (BNP) ಒಳಗೆ ಕಂಡು ಬಂದಿವೆ. ಮೆಟ್ರೋ ಹಳ್ಳಿಯ ಹೊರವಲಯಗಳಲ್ಲಿ ಸುಮಾರು 30 ಚಿರತೆಗಳು ಮೀಸಲಾದ, ಡೀಮ್ಡ್ ಮತ್ತು ಖಾಸಗಿ ಪ್ರದೇಶದ ಕಾಡುಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದೆ.

j3tvkannada.in
ಒಟ್ಟು 282 ಚದರ ಕಿಮೀ ಪ್ರದೇಶದಲ್ಲಿ 250 ಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್ಗಳನ್ನು ಬಳಸಲಾಗಿದ್ದು, ಅವುಗಳಲ್ಲಿ ತುರಹಳ್ಳಿ, ತುರಹಳ್ಳಿ ಗುಡ್ಡ, ಬಿ.ಎಂ. ಕಾವಲ್, ಯು.ಎಂ. ಕಾವಲ್, ರೋರೆಚ್ ಎಸ್ಟೇಟ್, ಗೊಲ್ಲಹಳ್ಳಿ ಗುಡ್ಡ, ಸುಳಿಕೇರೇ, ಹೆಸರಘಟ್ಟ, ಮರುಸಂದ್ರ, ಮಂಡೂರು, ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಪ್ರಮುಖ ಪ್ರದೇಶಗಳಾಗಿವೆ.

ಚಿರತೆಗಳ ಜೊತೆ ಜೊತೆಗೆ, ಇನ್ನೂ 34 ಪ್ರಾಣಿಗಳ ಪ್ರಭೇದಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇವುಗಳಲ್ಲಿ ನಾಲ್ಕು ಪ್ರಭೇದಗಳು ಅಳಿವಿನಂಚನಲ್ಲಿರುವುದಷ್ಟೇ ಅಲ್ಲ, ನಾಲ್ಕು ತೀರಾ ಅಳಿವಿನಂಚನ್ನು ಪ್ರವೇಶಿಸುತ್ತಿರುವ IUCN ಕೆಂಪು ಪಟ್ಟಿಯಲ್ಲಿರುವ ಪ್ರಾಣಿಗಳಾಗಿವೆ. 22 ಪ್ರಭೇದಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ (1972) ಅನುಸೂಚಿ-1 ಮತ್ತು 5 ಪ್ರಭೇದಗಳು ಅನುಸೂಚಿ-2 ಅಡಿಯಲ್ಲಿ ಬರೆಯಲ್ಪಟ್ಟಿವೆ.
ಚಿರತೆಗಳ ಸಂಖ್ಯೆಯಲ್ಲಿ ಮುಂಬೈಯನ್ನೂ ನಮ್ಮ ಬೆಂಗಳೂರು ಇದೀಗ ಹಿಂದಿಕ್ಕಿದೆ.
ನಗರವು ಈಗ ಮುಂಬೈನ 54 ಚಿರತೆಗಳ ದಾಖಲೆಯನ್ನೇ ಹಿಂದಿಕ್ಕಿದೆ. ಇದರಿಂದ ಬೆಂಗಳೂರು ದೇಶದ ಅತ್ಯಧಿಕ ಕಾಡು ಚಿರತೆಗಳನ್ನು ಹೊಂದಿರುವ ಮಹಾನಗರವಾಗಿ ಹೊರ ಹೊಮ್ಮಿದೆ. ಅಲ್ಲದೆ, ಬೆಂಗಳೂರು ಹೊರವಲಯಗಳಲ್ಲಿ ಹುಲಿ, ಚಿರತೆ, ಧೋಳ್ (ಕಾಡುನಾಯಿ), ಆನೆ, ಗೌರ್ (ಕಾಡೆಮ್ಮೆ), ಸಾಂಬಾರ್ ಮತ್ತು ಇತರೆ ದೊಡ್ಡ ಪ್ರಾಣಿಗಳು ಸಹಜವಾಗಿಯೇ ಜೀವಿಸುತ್ತಿರುವುದು ವಿಶೇಷವಾಗಿದೆ. ಇದಕ್ಕೆ ಸ್ಥಳೀಯರ ಸಹವಾಸವೂ ಕೂಡಾ ಕಾರಣವಾಗಿದೆ.
ಬನ್ನೇರುಘಟ್ಟದಲ್ಲಿ ಚಿರತೆಗಳ ಈ ಏರಿಕೆಗೆ ಮುಖ್ಯ ಕಾರಣವೆಂದರೆ ಕಠಿಣ ಸಂರಕ್ಷಣಾ ಕ್ರಮಗಳು ಮತ್ತು ಆಹಾರ ಲಭ್ಯತೆ, ಜೊತೆಗೆ ಇತರ ಜಿಲ್ಲೆಗಳ ಸಂಘರ್ಷ ಪ್ರದೇಶಗಳಿಂದ ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಿದ ಚಿರತೆಗಳೂ ಕಾರಣವಾಗಿರಬಹುದು ಎಂದು ಅಧ್ಯಯನ ತಂಡವು ಮಾಹಿತಿಯನ್ನು ನೀಡಿದೆ.
ಡಾ. ಸಂಜಯ್ ಗುಬ್ಬಿ ಅವರು ಈ ಅಧ್ಯಯನದ ನೇತೃತ್ವ ವಹಿಸಿದ್ದರು, ಶ್ರವಣ ಸುತಾರ್, ಸಂದೇಶ್ ಅಪ್ಪು ನಾಯ್ಕ್, ಪೂರ್ಣೇಶ ಎಚ್.ಸಿ., ಮಯೂರ ಮಿರಾಶಿ, ಐಶ್ವರ್ಯ ಕಾರಂತ್ ಹಾಗೂ ಸ್ಥಳೀಯರನ್ನೊಳಗೊಂಡ ತಂಡ ಇದರಲ್ಲಿ ಭಾಗವಹಿಸಿತ್ತು..
ಪ್ರಮುಖ ಶಿಫಾರಸುಗಳು
ಬಿ.ಎಂ. ಕಾವಲ್, ಯು.ಎಂ. ಕಾವಲ್, ರೋರೆಚ್ ಎಸ್ಟೇಟ್, ಗೊಲ್ಲಹಳ್ಳಿ ಗುಡ್ಡ ಈ ಪ್ರದೇಶಗಳನ್ನು ಸಂರಕ್ಷಣಾ ಅಭಯಾರಣ್ಯವಾಗಿ ಘೋಷಿಸಬೇಕು. ದುರ್ಗಡಕಲ್ ಆರ್ಎಫ್, ಬೆಟ್ಟಹಳ್ಳಿವಾಡೆ ಆರ್ಎಫ್ (ಬ್ಲಾಕ್ ಬಿ), ಜೆ.ಐ. ಬಚಹಳ್ಳಿ, ಎಂ. ಮಣಿಯಂಬಾಲ್ ಮುಂತಾದ ಕಾಡುಗಳನ್ನು ಬನ್ನೇರುಘಟ್ಟ ಉದ್ಯಾನವನಕ್ಕೆ ಸೇರಿಸಬೇಕು.
ಮುನೇಶ್ವರಬೆಟ್ಟ–ಬನ್ನೇರುಘಟ್ಟ ಪ್ರಾಣಿ ಜಾನುವಾರು ಸಂಚಾರದ ಮಾರ್ಗವನ್ನು ಉಳಿಸಿ ರಕ್ಷಣೆ ನೀಡಬೇಕು. ಸ್ಥಳಾಂತರಿತ ಚಿರತೆಗಳನ್ನು ಬನ್ನೇರುಘಟ್ಟಕ್ಕೆ ತರಬಾರದು. ಬದಲಾಗಿ ಮೂಲ ಸಮಸ್ಯೆಗಳನ್ನೇ ತಡೆಗಟ್ಟಬೇಕು. ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ನಗರ ವಿಸ್ತರಣೆಗೂಂಡಂತೆ ಮಿತವಾಗಿ ಜಂತುಗಳೊಂದಿಗೆ ಸಹವಾಸ ಸಾಧ್ಯವಾಗಬೇಕು ಎಂಬ ಶಿಫಾರಸು ಮಾಡಲಾಗಿದೆ.