
ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಜಿಲ್ಲಾ ಕೇಂದ್ರದಲ್ಲಿ ಕಾನೂನು ಕಾಲೇಜು ಆರಂಭಕ್ಕೆ ಅನುಮೋದನೆ ದೊರೆತಿದ್ದು, ತಮ್ಮ ಪ್ರಯತ್ನದ ಫಲವಾಗಿ ಪ್ರಸಕ್ತ ವರ್ಷದಿಂದಲೇ ಕಾಲೇಜು ಆರಂಭವಾಗಲಿದೆ ಎಂದು ಎಂ.ಎ.ಸ್ಐ.ಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

j3tvkannada
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದ ಕಾನೂನು ಕಾಲೇಜು ಆರಂಭಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಇದಕ್ಕೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಹಾಗೂ ನನ್ನ ಹೋರಾಟದ ಫಲವಾಗಿ ಕಾನೂನು ಕಾಲೇಜು ಮಂಜೂರಾಗಿದೆ ಎಂದರು.
2017-18ನೇ ಸಾಲಿನಲ್ಲಿ ಚಾಮರಾಜನಗರದಲ್ಲಿ ಕಾನೂನು ಕಾಲೇಜು ಮಂಜೂರಾಗಿತ್ತು. ಆದರೆ, ಸೂಕ್ತ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕಾಲೇಜು ಆರಂಭಕ್ಕೆ ಅಡ್ಡಿಯಾಗುತ್ತಿತ್ತು. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಕಾನೂನು ಕಾಲೇಜಿಗೆ ಅನುಮತಿಯಾಗಿತ್ತು. ಈಗ ಮತ್ತೆ ಅವರೇ ಮುಖ್ಯ ಮಂತ್ರಿಯಾಗಿರುವ ಅವಧಿಯಲ್ಲಿ ಕಾಲೇಜು ಆರಂಭವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು ಈ ಹಿಂದೆ ಸಂಸದರಾಗಿದ್ದ ದಿ. ಆರ್. ಧ್ರುವನಾರಾಯಣ್ ಜಿಲ್ಲೆಯಲ್ಲಿ ಕಾನೂನು ಕಾಲೇಜು ಅಗಬೇಕೆಂದು ಹೋರಾಟ ಮಾಡಿದ್ದರು. ಅವರ ಜೊತೆ ನಾನು ಸಹ ಕೈ ಜೋಡಿಸಿ ದೆಹಲಿ ಬಾರ್ ಕೌನ್ಸಿಲ್ ಮತ್ತು ರಾಜ್ಯ ಸರ್ಕಾರ ಕಾನೂನು ಸಚಿವರಿಗೆ ಮನವಿ ಮಾಡಿದ್ದೆ. ಈಗಿನ ಸಂಸದ ಸುನೀಲ್ ಅವರು ಮುಂದುವರಿದು ಪತ್ರ ಬರೆದು ಮಂಜೂರು ಮಾಡುವಂತೆ ಮನವಿ ಮಾಡಿದ್ದರು ಎಂದರು.
ಕಾನೂನು ಕಾಲೇಜಿಗೆ ಅನುಮತಿ ಪಡೆದುಕೊಳ್ಳಲು ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಾಗಿತ್ತು. ರೇಷ್ಮೆ ಇಲಾಖೆಗೆ ಸೇರಿದ ಜಾಗದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ. ಈಗ ಮತ್ತೆ ಎಂ.ಎ.ಸ್ಐ.ಎಲ್ ವತಿಯಿಂದ 13.50 ಲಕ್ಷ ವೆಚ್ಚದ ಪೀಠೋಪಕರಗಳನ್ನು ಕಾಲೇಜಿಗೆ ಕೊಡಿಸಿದ್ದೇನೆ. ದೆಹಲಿಯ ಬಾರ್ ಕೌನ್ಸಿಲ್ ಅವರು ಪರಿಶೀಲನೆಗೆ ಬಂದಾಗ ಎಲ್ಲಾ ವ್ಯವಸ್ಥೆಯು ಸರಿ ಇರುವಂತೆ ನೋಡಿಕೊಂಡಿದ್ದೆವು. ಈಗಾಗಲೇ ಕಾಲೇಜಿಗೆ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಕಾನೂನು ಕಾಲೇಜಿಗೆ ಸ್ವಂತ ನಿವೇಶನ ಹಾಗೂ ಕಟ್ಟಡ ನಿರ್ಮಾಣ ಮಾಡಲು ಅನುದಾನವು ಸಹ ಬಿಡುಗಡಯಾಗಿದೆ. ಚಾಮರಾಜನಗರ ತಾಲೂಕು ಕಸಬಾ ಹೋಬಳಿಯ ಯಡಪುರ ಗ್ರಾಮದ ಸ.ನಂ.112ರಲ್ಲಿ ಸರ್ಕಾರಿ ಖರಾಬು ಜಮೀನಿನ ಪೈಕಿ 4 ಎಕರೆ ಜಮೀನನ್ನು ಸರ್ಕಾರಿ ಕಾನೂನು ಕಾಲೇಜು ನಿರ್ಮಾಣಕ್ಕೆ ಗುರುತಿಸಲಾಗಿದ್ದು ಮುಂದಿನ ದಿನಗಳಲ್ಲಿ ಸುಸಜ್ಜಿತ ಕಾಲೇಜು ಕಟ್ಟಡ ನಿರ್ಮಾಣವಾಗಲಿದೆ. ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮೊದಲ ವರ್ಷದ ಮೂರು ವರ್ಷದ ಕಾನೂನು ಕೋರ್ಸುಗಳನ್ನು ಆರಂಬಿಸಲಾಗುತ್ತಿದೆ. ಪದವಿ ಪಡೆದವರು ಕಾನೂನು ಕಾಲೇಜಿಗೆ ಪ್ರವೇಶ ಪಡೆದುಕೊಳ್ಳಲು ಆಗಸ್ಟ್ ನಿಂದ ಅನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಿ, ಸೇರ್ಫಡೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕಾನೂನು ಕಾಲೇಜಿನ ಪ್ರಾಂಶುಪಾಲೆ ಕೆ.ಎಸ್.ಲಲಿತಾ ಮಾತನಾಡಿ, ಈ ವರ್ಷದಿಂದಲೇ ಕಾನೂನು ಕಾಲೇಜು ಆರಂಭಕ್ಕೆ ಅನುಮತಿ ದೊರೆತಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಿಂದ ಆದೇಶ ಬಂದ ನಂತರ ದಾಖಲಾತಿಗೆ ಅರ್ಜಿ ಸ್ವೀಕರಿಸಲಾಗುವುದು. 60 ವಿದ್ಯಾರ್ಥಿಗಳಿಗೆ ದಾಖಲಾತಿಗೆ ಅವಕಾಶವಿದ್ದು ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತಿದೆ. ಈಗಾಗಲೇ ಕಾಲೇಜಿನಲ್ಲಿ 5 ಪ್ರಾಧ್ಯಾಪಕರಿದ್ದು ಕಾಲೇಜಿನಲ್ಲಿ ಪೀಠೋಪಕರಣ, ಶೌಚಾಲಯ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಕಾನೂನು ಪದವಿ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಟರ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಅಧ್ಯಕ್ಷ ನಲ್ಲೂರು ಸೋಮೇಶ್ವರ್, ತಾ ಪಂ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್. ಎಸ್ಪಿ ಕೆ ಉಮೇಶ್, ನಗರಸಭೆ ನಾಮ ನಿರ್ದೇಶಿತ ಸದಸ್ಯ ಸ್ವಾಮಿ ಇದ್ದರು.