
ಬಾಗಲಕೋಟೆ(ಗುಳೇದಗುಡ್ಡೆ); ಗುಳೇದಗುಡ್ಡೆ ರೈಲ್ವೇ ನಿಲ್ದಾಣದಿಂದ ಖಾಜಿ ಬೂದಿಹಾಳ ಗ್ರಾಮಕ್ಕೆ ಹೋಗುವ 1.5 ಕಿ ಮೀ ರಸ್ತೆ ಕಾಮಗಾರಿಯನ್ನು ರೂ 1.10 ಕೋಟಿ ಅನುದಾನದಲ್ಲಿ ವರ್ಷದ ಹಿಂದೆ ಪ್ರಾರಂಭಿಸಲಾಗಿತ್ತು. ಆದರೆ ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಾಗಿ ಕಾಮಾರಿಯನ್ನು ಅರ್ಧಕ್ಕೇ ನಿಲ್ಲಿಸುವಂತಾಗಿತ್ತು.

j3tvkannada.in
ಇದರಿಂದಾಗಿ ಪಾದಾಚಾರಿಗಳು ಮತ್ತು ವಾಹನ ಸವಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಲೋಕೋಪಯೋಗಿ ಇಲಾಖೆಯು ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು, ಆದರೆ ಅದಕ್ಕೆ ಅರಣ್ಯ ಇಲಾಖೆಯಿಂದ ವಿರೋಧ ವ್ಯಕ್ತವಾಗಿತ್ತು. ಜಲ್ಲಿ ಕಲ್ಲು ರಸ್ತೆ ತುಂಬಾ ಹಾಕಿದ್ದರಿಂದ ಜನರಿಗೆ ತೊಂದರೆಯಾಗಿದೆ. ಒಂದು ಕಿಲೋ ಮೀಟರ್ನಷ್ಟು ಕಚ್ಚಾ ರಸ್ತೆ ಇದ್ದು ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆ ಕೆಸರುಮಯವಾಗಿದೆ. ಹಲವು ಬೈಕ್ ಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಅರಣ್ಯ ಇಲಾಖೆಯು ಈ ಸಮಸ್ಯೆ ಬಗೆಹರಿಸಿ ಬೇಗನೇ ರಸ್ತೆ ನಿರ್ಮಾಣವಾಗುವಂತೆ ಸಹಕರಿಸಬೇಕು ಎಂದು ಖಾಜಿ ಬೂದಿಹಾಳ ಗ್ರಾಮಸ್ಥರಾದ ಇಮ್ತಿಯಾಜ್ ಖಾಜಿ, ಇಸ್ಮಾಯಿಲ್ ಖಾಜಿ, ಯಲ್ಲಪ್ಪ ಹಡಪದ, ಸಿಕಂದರ ಖಾಜಿ ಆಗ್ರಹಿಸಿದ್ದಾರೆ.
ವಾಹನ ಸವಾರರ ಟೈರ್ಗಳು ಹಾಳಾಗುತ್ತವೆ ಎಂಬುದು ಸವಾರರ ಅಳಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವುದೇ ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ರಸ್ತೆಯಾಗಿರುವುದರಿಂದ ರಸ್ತೆ ಮಾಡಲು ಅರಣ್ಯ ಇಲಾಖೆಗೆ ಇ-ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಅನುಮತಿ ಪಡೆದ್ದಿಲ್ಲದ ಕಾರಣ ಕಾಮಗಾರಿ ನಿಲುಗಡೆ ಮಾಡಲಾಗಿದೆ ಎಂದು ಬಾದಾಮಿ ಅರಣ್ಯ ಇಲಾಖೇ ವಲಯ ಅರಣ್ಯಾಧಿಕಾರಿ ಮಹೇಶ ಮರಿಯಣ್ಣವರ ಹೇಳಿದ್ದಾರೆ.