
ಕೊಪ್ಪಳ: ಐಪಿಎಲ್ನ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸಿದ್ದಕ್ಕೆ ತಾಲೂಕಿನ ಬಂಡಿಹರ್ಲಾಪುರದ ಯುವಕರು ಊರಿಗೆ ಬಾಡೂಟ ಹಾಕಿದ್ದಾರೆ. ಇದೇ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರಿಗೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

j3tvkannada.in
ಆರ್ಸಿಬಿ ಕಪ್ ಗೆದ್ದ ದಿನವೇ ಬಾಡೂಟ ಹಾಕಿಸಬೇಕು ಎಂದುಕೊಂಡಿದ್ದರು. ಆದರೆ ಅಂದು ತಡರಾತ್ರಿಯಾಗಿದ್ದರಿಂದ ಆಗಲಿಲ್ಲ. ಮರುದಿನ ಮಾಡಿಸಲು ನಿರ್ಧರಿಸಿದ್ದರು ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 11 ಜನರು ಮೃತಪಟ್ಟಿದ್ದರಿಂದ ಕೈಬಿಡಲಾಗಿತ್ತು. ಇದೀಗ ಗುರುವಾರ ಬಾಡೂಟ ಹಾಕುವ ಜತೆಗೆ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಆರ್ಸಿಬಿ ಫೈನಲ್ ಪ್ರವೇಶಿಸುತ್ತಿದ್ದಂತೆ ಗ್ರಾಮದ ಯುವಕರೆಲ್ಲರೂ ಸೇರಿ ಈ ಬಾರಿ ಕಪ್ ಗೆದ್ದರೇ ಊರಿಗೆ ಬಾಡೂಟ ಹಾಕೋಣವೆಂದು ಮಾತನಾಡಿಕೊಂಡಿದ್ದಾರೆ. ಅದರಂತೆ ಆರ್ಸಿಬಿ ಫೈನಲ್ನಲ್ಲಿ ಗೆಲುವು ಸಾಧಿಸಿದ್ದರಿಂದ ಎಲ್ಲರೂ ಸೇರಿ 2 ಕ್ವಿಂಟಾಲ್ ಚಿಕನ್ ಮತ್ತು 2 ಕ್ವಿಂಟಾಲ್ ಪಲಾವ್ ಮಾಡಿ ಇಡೀ ಗ್ರಾಮದ ಜನರಿಗೆ ಬಾಡೂಟ ಹಾಕಿಸಿದ್ದಾರೆ.ಆರ್ಸಿಬಿ ಗೆದ್ದರೆ ಗ್ರಾಮಕ್ಕೆ ಬಾಡೂಟ ಹಾಕಿಸಬೇಕೆಂದು ತೀರ್ಮಾನಿಸಿದ್ದೆವು ಅದರಂತೆ ಗೆದ್ದಿತು. ಆದರೆ, ಮರುದಿನವೇ ದುರಂತ ನಡೆದಿದ್ದರಿಂದ ಒಂದು ದಿನ ತಡವಾಗಿ ಊರಿಗೆ ಊಟ ಹಾಕಿಸಿದ್ದೇವೆ ಎಂದು ಯುವಕ ರಾಜು ಯಾದವ್ ತಿಳಿಸಿದ್ದಾರೆ.