
ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ ವಾನಳ್ಳಿ ವಿರುದ್ಧ ಜಾತಿನಿಂದನೆಯ ಆರೋಪದಡಿ ನಗರದ ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

j3tvkannada
ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರೂ ಎಫ್.ಐ.ಆರ್ ದಾಖಲು ಮಾಡದ ಹಿನ್ನೆಲೆಯಲ್ಲಿ ಡಾ.ಆರ್. ಮಂಜುನಾಥ್ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅದರಂತೆ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಅದರಂತೆ ಗಲ್ಪೇಟೆ ಪೊಲೀಸರು ನಿರಂಜನ ವಾನಳ್ಳಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ತಿದ್ದುಪಡಿ ಬಿಲ್ 2015 ಹಾಗೂ ಭಾರತೀಯ ನ್ಯಾಯ ಸಂಹಿತೆ 2023ರ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ.
ಬೆಂಗಳೂರು ಉತ್ತರ ವಿ.ವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅತಿಥಿ ಉಪನ್ಯಾಸಕನಾಗಿ ಕಳೆದ ಏಳು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ವಿ.ವಿಯಲ್ಲಿ ಹಣ ದುರುಪಯೋಗದ ಬಗ್ಗೆ ಕುಲಪತಿಗಳ ಗಮನಕ್ಕೆ ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ತಂದಿದ್ದೇನೆ. ಇತ್ತೀಚೆಗೆ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ 125 ಸಿ.ಸಿ ಕ್ಯಾಮೆರಾ 99,230 ಮೀಟರ್ ಕೇಬಲ್ ಖರೀದಿಸಲು ಮುಂದಾದಾಗ, ಇದರಲ್ಲಿ 25 ಲಕ್ಷ ರೂ.ಗಳನ್ನು ವಿ.ವಿಗೆ ಉಳಿಸಿರುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವಿಷಯವಾಗಿ ಕುಲಪತಿಗಳು ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದು, ಅದರ ಭಾಗವಾಗಿ 2024ರ ಡಿಸೆಂಬರ್ ಹಾಗೂ 2025ರ ಫೆಬ್ರುವರಿಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಹೆಚ್ಚುವರಿ ಕಾರ್ಯಸೂಚಿಯಾಗಿ ನನ್ನ ವಿರುದ್ಧ ಯಾರೂ ದೂರು ನೀಡದೆ ಇದ್ದರೂ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುತ್ತಾರೆ ಎಂದು ಉಲ್ಲೇಖಿಸಿದ್ದಾರೆ.
ಹಿಂದಿನಿಂದಲೂ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದ ಕುಲಪತಿಗಳು ಈ ಸಭೆಗಳಲ್ಲಿ ಮಹಿಳಾ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸುತ್ತಿರುವುದಾಗಿ ಸುಳ್ಳು ಆರೋಪ ಹೊರಿಸಿ ನನ್ನ ಮಾನಹಾನಿ ಮಾಡಿರುತ್ತಾರೆ. ಜತೆಗೆ ಜಾತಿಯ ಕಾರಣಕ್ಕಾಗಿ ಹಲವು ಆರೋಪಗಳನ್ನು ಮಾಡಿದ್ದು, ಖುದ್ದಾಗಿ ಸಿಂಡಿಕೇಟ್ ಸದಸ್ಯರೇ ಈ ವಿಷಯಗಳು ಚರ್ಚೆಯಾಗಿಲ್ಲವೆಂದು ತಿಳಿಸಿದ್ದಾರೆ. ಮುಂದುವರಿದ ಕೆ.ಸಿ.ಎಸ್.ಆರ್ ನಿಯಮದಂತೆ ನನ್ನ ಮೇಲೆ ಕ್ರಮ ವಹಿಸಲು ನಿರ್ಣಯಿಸಿದ್ದು, ಅತಿಥಿ ಉಪನ್ಯಾಸಕರಿಗೆ ಕೆ.ಸಿ.ಎಸ್.ಆರ್ ಕಾಯ್ದೆ ಅನ್ವಯಿಸುವುದಿಲ್ಲ. ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಹೊರಡಿಸಿ ನನಗೆ ಮಾನಹಾನಿ ಮಾಡಿದ್ದಾರೆ. ಜತೆಗೆ ನನಗೆ ಜಾತಿ ನಿಂದನೆ ಮಾಡಿ ಸಮಾಜದಲ್ಲಿ ನನ್ನ ಗೌರವವನ್ನು ಹಾಳು ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.