
ಬೆಂಗಳೂರು(ಆನೇಕಲ್):ಒಬ್ಬೊಬ್ಬರದು ಒಂದೊಂದು ರೀತಿಯ ಜೀವನ. ಈ ಜೀವನದಲ್ಲಿ ಯಾರು ಯಾವ ಕ್ಷಣದಲ್ಲಿ ಕೊಲೆಗಾರರಾಗುತ್ತಾರೆ, ಯಾರು ಯಾವ ಕ್ಷಣದಲ್ಲಿ ಕೊಲೆಯಾಗಿ ಸಾಯುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡು ಆಕ್ರೋಶಗೊಂಡ ಪತಿ ಮಾರಾಕಾಸ್ತ್ರದಿಂದ ಪತ್ನಿಯ ತಲೆ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿ ರುಂಡದೊಂದಿಗೆ ಸೂರ್ಯನಗರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

j3tvkannada.in
ಚಂದಾಪುರದ ಹೆಬ್ಬಗೋಡಿ ನಿವಾಸಿ ಮಾನಸಾ(26) ಪತಿಯಿಂದಲೇ ಕೊಲೆಯಾದ ಪತ್ನಿ. ಹೆನ್ನಾಗರ ಸಮೀಪದ ಕಾಚನಾಯಕನಹಳ್ಳಿ ನಿವಾಸಿ ಶಂಕರ್ (28) ಹಾಗೂ ಹೆಬ್ಬಗೋಡಿಯ ನಿವಾಸಿ ಮಾನಸಾ ಕಳೆದ ಐದು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಕೆಲ ತಿಂಗಳ ಹಿಂದೆಯಷ್ಟೇ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು.
ಜೂ.3ರಂದು ಕೆಲಸದ ನಿಮಿತ್ತ ಶಂಕರ್ ತೆರಳುವಾಗ ಮಾರನೇ ದಿನ ಬರುವುದಾಗಿ ಹೇಳಿ ಹೋಗಿದ್ದರು. ಆದರೆ ಕೆಲಸ ಬೇಗ ಮುಗಿದ ಹಿನ್ನೆಲೆಯಲ್ಲಿ ಪತ್ನಿ ಮನೆಯಲ್ಲಿ ಒಬ್ಬಳೇ ಇರುತ್ತಾಳೆ ಎಂದು ನೆನೆದು ತಡರಾತ್ರಿಯೇ ಮನೆಗೆ ವಾಪಸ್ ಆಗಿದ್ದಾರೆ.
ಆದರೆ ಮನೆಗೆ ಬಂದಾಗ ಪತಿಯ ಚಿಂತೆಯಿಲ್ಲದೆ ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಾ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾಳೆ. ಪತ್ನಿಯ ಅನೈತಿಕ ಸಂಬಂಧ ಕಂಡು ಆಕ್ರೋಶಗೊಂಡ ಶಂಕರ್ ಅವರು ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರೆ.
ಮಾನಸಾಳಿಗೆ ಪ್ರಿಯಕರನ ಜೊತೆಗೆ ಹೋಗು ಎಂದು ಶಂಕರ್ ಕಳುಹಿಸಿದ್ದಾರೆ. ಆದರೆ ಪದೇಪದೇ ಶಂಕರ್ಗೆ ಕಿರುಕುಳ ನೀಡುತ್ತಿದ್ದಳು. ನಿನ್ನೆ ರಾತ್ರಿ ಸಹ ಶಂಕರ್ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ. ಪತ್ನಿಯ ವರ್ತನೆಯಿಂದ ತಾಳ್ಮೆ ಕಳೆದುಕೊಂಡ ಶಂಕರ್ ಕೈಗೆ ಸಿಕ್ಕಿದ ಮಾರಾಕಾಸ್ತ್ರಗಳಿಂದ ಪತ್ನಿಯನ್ನು ಕೊಲೆ ಮಾಡಿ ನಂತರ ರುಂಡ ಕತ್ತರಿಸಿ ಇಂದು ಬೆಳಗ್ಗಿನ ಜಾವ ರುಂಡದೊಂದಿಗೆ ಸೀದಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಪೊಲೀಸ್ ಠಾಣೆಯಲ್ಲಿದ್ದ ಸಿಬ್ಬಂದಿ ಬೆಳ್ಳಂಬೆಳಗ್ಗೆ ವ್ಯಕ್ತಿಯ ಕೈಯಲ್ಲಿ ಮಹಿಳೆಯ ರುಂಡ ಇರುವುದನ್ನು ಕಂಡು ಒಂದು ಕ್ಷಣ ಗಾಬರಿಯಾದರು. ನಂತರ ಶಂಕರ್ನನ್ನು ಘಟನೆ ಬಗ್ಗೆ ವಿಚಾರಿಸಿದಾಗ ಇದು ತನ್ನ ಪತ್ನಿಯ ತಲೆ ಎಂದು ನಡೆದ ಘಟನೆಯನ್ನು ವಿವರಿಸಿದ್ದಾನೆ.
ಸೂರ್ಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಂಕರ್ನನ್ನು ಬಂಧಿಸಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಸೂರ್ಯನಗರ ಠಾಣೆ ಇನ್ಸ್ಪೆಕ್ಟರ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.