
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರಗಳಲ್ಲಿ ವಿವಿಧೆಡೆ ಬೇರೂರಲು ಸುಮಾರು 3 ಲಕ್ಷಕ್ಕೂ ಅಧಿಕ ಸಸಿಗಳನ್ನು ಸಿದ್ಧ ಮಾಡಲಾಗಿದೆ. ಈ ಅರಣ್ಯ ಸಸ್ಯ ಕ್ಷೇತ್ರವೂ ಹಸಿರಿನಿಂದ ಕಂಗೊಳಿಸುತ್ತಿದ್ದು, ಹಸಿರು ವನಗಳಾಗಿ ಮಾರ್ಪಟ್ಟಿವೆ. ಹಸಿರು ನೆರಳಿನ ಛಾಮರ ಬೀಸುತ್ತಿದ್ದು ದಾರಿ ಹೋಕರನ್ನು ಕೈ ಬೀಸಿ ಕರೆಯುತ್ತಿವೆ.

ತಾಲೂಕಿನ ಕೊಕಟನೂರ ಮತ್ತು ಯಂಕಚ್ಚಿ ಗ್ರಾಮದ ಸಸ್ಯಪಾಲನಾ ಕ್ಷೇತ್ರಗಳಲ್ಲಿ ವಿವಿಧ ಜಾತಿಯ ರೋಗಾಣು ರಹಿತ ಸಾವಿರಾರು ಉತ್ತಮ ಸಸಿಗಳನ್ನು ಬೆಳೆಸಲಾಗಿದೆ. ಇಲ್ಲಿ ಸಸಿಗಳನ್ನು ಮಕ್ಕಳಂತೆ ಆರೈಕೆ ಮಾಡಲಾಗುತ್ತಿದ್ದು ಬೆಳೆದಿರುವ ನಾನಾ ತರಹದ ಗಿಡ-ಮರಗಳು ಕಣ್ಣನ್ನು ತಣಿಸುತ್ತಿವೆ. ಜತೆಗೆ ಪರಿಸರ ಕಾಳಜಿಯ ಪಾಠವನ್ನೂ ಪರಿಚಯಿಸುತ್ತಿವೆ.
ಭೀಕರ ಬೇಸಿಗೆ ದಿನಗಳಲ್ಲಿ ನೀರಿನ ಸಮಸ್ಯೆ ಇದ್ದಾಗಲೂ ಕಡಿಮೆ ಅವಧಿಯಲ್ಲಿ ಸಸಿಗಳನ್ನು ಬೆಳೆಸಲಾಗಿದೆ. ದಿನಗೂಲಿಗಳು ಹಾಗೂ ಇಲಾಖೆ ಸಿಬ್ಬಂದಿ ವರ್ಷವಿಡೀ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ಮೂಲಕ ಅರಣ್ಯ ಅಭಿವೃದ್ಧಿ, ಬರ ಅಳಿಸುವ ಸಂಕಲ್ಪದಿಂದ ಸಸಿಗಳನ್ನು ನೆಟ್ಟು ಸಂರಕ್ಷಿಸುವ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ತಾಲೂಕಿನ ಅರಣ್ಯ ಕ್ಷೇತ್ರಾಭಿವೃದ್ಧಿ ಮತ್ತಷ್ಟು ವಿಸ್ತರಿಸುವ ಆಶಾಭಾವ ಮೂಡಿಸಿದೆ.
ಪ್ರಸಕ್ತ 2025-26ನೇ ಸಾಲಿನಲ್ಲಿ ತಾಲೂಕಿನ ವಿವಿಧ ರಸ್ತೆಗಳ ಬದಿ, ಗೋಮಾಳ, ಸ್ಮಶಾನ, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳ ಆವರಣ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಸಸಿಗಳನ್ನು ನೆಡಲು ಪ್ರಾದೇಶಿಕ ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಅದರನ್ವಯ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮುಂಗಡ ಗುಂಡಿ ತೆಗೆಯಲಾಗಿದೆ.
ಹಸಿರು ಹಬ್ಬದ ಸಾವಿರಾರು ಸಸಿಗಳ ಬೆಳವಣಿಗೆಯಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ರಾಕೇಶ ಅರ್ಜುನವಾಡ ಹಾಗೂ ಪ್ರಶಾಂತ್ ಗೌರಾಣಿ ಅವರು ಜೋಡೆತ್ತುಗಳಂತೆ ಶ್ರಮಿಸಿದ್ದಾರೆ. ಈ ಇಬ್ಬರು ಅಧಿಕಾರಿಗಳದ್ದು ಗಿಡಗಳನ್ನು ಬೆಳೆಸುವುದು ಅವರ ವೃತ್ತಿ. ಆದರೂ, ಹಸಿರೀಕರಣ ಅವರ ಪ್ರವೃತ್ತಿಯಾಗಿದೆ.
ಹಾಗಾಗಿ ಅವರ ಕಾಳಜಿಯಿಂದ ಸಾವಿರಾರು ಸಸಿಗಳು ಹಸಿರೆಲೆಯಿಂದ ಅಸಂಖ್ಯಾತ ಜೀವಕುಲಕ್ಕೆ ನೆರಳಾಗಲಿವೆ.ಒಟ್ಟಾರೆಯಾಗಿ ಹಸಿರೇ ಉಸಿರು ಎನ್ನುವ ನಾನ್ನುಡಿಯಂತೆ ಪ್ರತಿ ಪ್ರಜೆಯು ಪರಿಸರ ರಕ್ಷಣೆಯ ಹೊಣೆಗಾರಿಕೆ ಹೊತ್ತು ಸಸ್ಯ ರಕ್ಷಣೆ ಬಗ್ಗೆ ಚಿಂತನೆ ಉಳಿಸುವುದು ಉತ್ತಮ.