
ಮೈಸೂರು: ಸಣ್ಣ ಮಳೆ ಬಂದರೆ ಸಾಕು ಈ ಬಡಾವಣೆಯ ನಿವಾಸಿಗಳು ಬೆಚ್ಚಿ ಬೀಳುತ್ತಾರೆ. ಮನೆಯೊಳಗೆ ಯು.ಜಿ.ಡಿ ನೀರು, ಸೊಳ್ಳೆಗಳ ಕಾಟ, ದುರ್ವಾಸನೆ, ಸಾಂಕ್ರಾಮಿಕ ರೋಗ ಭೀತಿಯಲ್ಲಿ ದಿನದೂಡುತ್ತಾರೆ. ಇಡೀ ಬಡಾವಣೆಯೇ ಒಳಚರಂಡಿ ನೀರಿನಿಂದ ಅವೃತವಾಗುತ್ತದೆ. ಇದರಿಂದ ನಿತ್ಯ ಬಡಾವಣೆ ನಿವಾಸಿಗಳು ಪರಿತಪಿಸುವಂತೆ ಆಗಿದೆ.

j3tvkannada
ನಗರದ ಹೃದಯ ಭಾಗದಲ್ಲಿರುವ ಜೆ.ಎಲ್.ಬಿ ರಸ್ತೆಯಲ್ಲಿನ ಎಲೆ ತೋಟಕ್ಕೆ ಹೊಂದಿ ಕೊಂಡಂತೆ ಇರುವ ಹೊಯ್ಸಳ ಬಡಾವಣೆಯಲ್ಲಿ ಪಾಲಿಕೆಯ 54ನೇ ವಾರ್ಡಿಗೆ ಸೇರಿರುವ ಖಾಸಗಿ ಬಡಾವಣೆಯಲ್ಲಿ150 ಕ್ಕೂ ಹೆಚ್ಚು ಮನೆಗಳಿದ್ದು, ವ್ಯವಸ್ಥಿತವಾಗಿ ಒಳಚರಂಡಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಪಾಲಿಕೆಯ ಅಧಿಕಾರಿಗಳ ಎಡವಟ್ಟಿನಿಂದ ಈಗ ಇಡೀ ಬಡಾವಣೆಯಲ್ಲಿ ಯು.ಜಿ.ಡಿ ನೀರು ಉಕ್ಕಿ ಹರಿಯುವಂತೆ ಆಗಿದೆ.
ತಗ್ಗು ಪ್ರದೇಶದಲ್ಲಿನ ಹೊಯ್ಸಳ ಬಡಾವಣೆಯ ಯು.ಜಿ.ಡಿ ಪೈಪ್ ಲೈನ್ಗೆ ವಿದ್ಯಾರಣ್ಯಪುರಂ ಮತ್ತು ಬೇಸ್ತರ ಗೇರಿ ಬಡಾವಣೆಗಳಿಂದ ಬರುವ ಒಳಚರಂಡಿ ನೀರನ್ನು ಸಂಪರ್ಕ ಮಾಡಿರುವುದರಿಂದ ಒತ್ತಡ ಹೆಚ್ಚಾಗಿ ಯು.ಜಿ.ಡಿ ನೀರು ರಸ್ತೆಯಲ್ಲಿ ಉಕ್ಕಿ ಹರಿಯುತ್ತಿದೆ. ಇದರೊಂದಿಗೆ ಒಳಚರಂಡಿ ನೀರನ್ನು ಸಂಪರ್ಕ ಕಲ್ಪಿಸಿರುವ ದೊಡ್ಡ ಚರಂಡಿಯಲ್ಲಿ ಹಲವು ವರ್ಷಗಳಿಂದ ಹೂಳೆತ್ತದೇ ಇರುವ ಪರಿಣಾಮ ಚರಂಡಿಯಲ್ಲಿ ಹರಿಯಬೇಕಾದ ಯು.ಜಿ.ಡಿ ನೀರು ರಿವರ್ಸ್ ಆಗಿ ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಸೇರಿದಂತೆ ಹಿಂದಿನ ಪಾಲಿಕೆ ಸದಸ್ಯರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರವೀಣ್.
ವ್ಯವಸ್ಥಿತವಾಗಿ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಹೊಂದಿದ್ದ ಹೊಯ್ಸಳ ಬಡಾವಣೆಯಲ್ಲಿ ಒಳಚರಂಡಿಯ ಯಾವುದೇ ಸಮಸ್ಯೆ ಇರಲಿಲ್ಲ. ಬೆಸ್ತರ ಗೇರಿಯ 4,5 ಮತ್ತು ಆರನೇ ಕ್ರಾಸಿನ ರಸ್ತೆಗಳಲ್ಲಿಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿತ್ತು. ಈ ಹಿನ್ನೆಲೆಯಲ್ಲಿಇದನ್ನು ಸರಿಪಡಿಸಲು ಹೊಯ್ಸಳ ಬಡಾವಣೆಯಲ್ಲಿನ ಒಳಚರಂಡಿ ಪೈಪ್ಲೈನ್ಗೆ ಪಾಲಿಕೆ ಅಧಿಕಾರಿಗಳು ಸಂಪರ್ಕ ಕಲ್ಪಿಸಿದರು. ಜತೆಗೆ ವಿದ್ಯಾರಣ್ಯಪುರಂ ಬಡಾವಣೆ ವ್ಯಾಪ್ತಿಯ ರಸ್ತೆಗಳ ಯು.ಜಿ.ಡಿ ಸಂಪರ್ಕವನ್ನು ಇಲ್ಲಿಗೆ ಸಂಪರ್ಕಿಸಿದ್ದರಿಂದ ಹೊಯ್ಸಳ ನಗರ ಬಡಾವಣೆಯಲ್ಲಿನ ಯು.ಜಿ.ಡಿ ಪೈಪ್ ಲೈನ್ನ ಒತ್ತಡ ಹೆಚ್ಚಾಗಿ ಉಕ್ಕಿ ಹರಿಯುತ್ತಿದೆ, ಎನ್ನುತ್ತಾರೆ ಸ್ಥಳೀಯ ನಿವಾಸಿ ರಾಜೇಶ್.
ಒಳಚರಂಡಿ ನೀರನ್ನು ಎಳೆತೋಟದ ಮಧ್ಯೆ ಹಾದು ಹೋಗಿರುವ ದೊಡ್ಡ ಮಳೆ ನೀರು ಚರಂಡಿಗೆ ಬಿಡಲಾಗಿದ್ದು, ಚರಂಡಿಯಲ್ಲಿಹೂಳೆತ್ತದ ಪರಿಣಾಮ ಯು.ಜಿ.ಡಿ ನೀರು ವಾಪಸ್ ಬರುತ್ತಿದ್ದು, ಮನೆಯೊಳಗೆ ನುಗ್ಗುತ್ತಿದೆ. ಸಣ್ಣ ಮಳೆ ಬಂದರೂ ಚರಂಡಿ ತುಂಬಿ ಹರಿಯಲಿದ್ದು, ಯು.ಜಿ.ಡಿ ಪೈಪ್ ಲೈನ್ನಲ್ಲಿನೀರು ರಿವರ್ಸ್ ಆಗಿ ಬರಲಿದೆ. ಇದರಿಂದಲೂ ಸಮಸ್ಯೆ ಹೆಚ್ಚಾಗಿದೆ, ಎನ್ನುತ್ತಾರೆ ಬಡಾವಣೆ ನಿವಾಸಿ ಪವನ್.