
ಮಂಡ್ಯ: ಆತ ಸಿವಿಲ್ ಇಂಜಿನಿಯರ್. ಬರುವ ಶ್ರಾವಣದಲ್ಲಿ ಮದುವೆ ಮಾಡಬೇಕು ಅಂತ ಹುಡುಗಿ ಹುಡುಕುತ್ತಿದ್ದರು. ಆದ್ರೆ ಆರ್.ಸಿ.ಬಿ ಗೆದ್ದ ಸಂಭ್ರಮಾಚರಣೆಗೆಂದು ಹೋದವನು ಮನೆಗೆ ತಿರುಗಿದ್ದು ಶವವಾಗಿ.

j3tvkannada
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತು. ಆದ್ರೆ ಆ ಗೆಲುವಿನ ಸಂಭ್ರಮ 18 ಗಂಟೆಯೂ ಇರಲಿಲ್ಲ. ಸಂಭ್ರಮಾಚರಣೆಗೆ ಹೋದ 11 ಜೀವಗಳು ಹೋಗಿವೆ. ಜೀವ ಕಳೆದುಕೊಂಡ ಒಬ್ಬೊಬ್ಬರದ್ದೂ ಒಂದೊಂದು ಕಣ್ಣೀರ ಕಥೆ. ದುರಂತದಲ್ಲಿ ಜೀವ ಕಳೆದುಕೊಂಡ ಮಂಡ್ಯದ ಯುವಕನ ಕಥೆ ಸಹ ಕಣ್ಣೀರು ತರಿಸುವಂತಹದ್ದೇ ಆಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಪೂರ್ಣಚಂದ್ರ (27) ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ರಾಯಸಮುದ್ರದ ನಿವಾಸಿ. ಮೈಸೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ.
ಈ ವರ್ಷದಲ್ಲಿ ಮದುವೆ ಮಾಡಬೇಕು ಅಂತ ಕುಟುಂಬಸ್ಥರು ಹುಡುಗಿ ಹುಡುಕಾಟದಲ್ಲಿದ್ದರು. ನಿನ್ನೆ ಕೂಡ ಹುಡುಗಿ ನೋಡಿಕೊಂಡು ಬಾ ಅಂತ ಕಳುಹಿಸಿದ್ದರು. ಅದರಂತೆ ಮಂಡ್ಯದಲ್ಲಿ ಹುಡುಗಿ ನೋಡಿಕೊಂಡು ಮೈಸೂರಿಗೆ ಹೋದವನೇ ಸ್ನೇಹಿತರ ಜೊತೆ ಬೆಂಗಳೂರಿಗೆ ಹೋಗಿದ್ದಾನೆ. ಮೆಟ್ರೋ ಇಳಿದು ಬೇರೆ ಬೇರೆಯಾದವರು ಸಂಪರ್ಕಕ್ಕೇ ಸಿಕ್ಕಿಲ್ಲವಂತೆ. ಇದಾದ ಬಳಿಕ ಮಾಧ್ಯಮದಲ್ಲಿ ಸುದ್ದಿ ನೋಡಿದ ಮೇಲೆ ಸಾವಿನ ವಿಚಾರ ಗೊತ್ತಾಗಿದೆ. ಇವರ ಕುಟುಂಬಸ್ಥರು ಕೂಡ ಆರ್.ಸಿ.ಬಿ ಗೆದ್ದ ಖುಷಿಯಲ್ಲಿ ಇದ್ದರಂತೆ. ಮೊನ್ನೆ ರಾತ್ರಿ ಮನೆಯಲ್ಲಿ ಸಿಹಿ ತಿಂದು ಖುಷಿ ಪಟ್ಟಿದ್ದರಂತೆ. ಆದರೆ ಈಗ ಆ ಖುಷಿ ಮಗನನ್ನು ಕಿತ್ತುಕೊಂಡಿದ್ದನ್ನು ನೆನೆದು ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ಮರಣೋತ್ತರ ಪರೀಕ್ಷೆಯಾದ ಬಳಿಕ ಮುಂಜಾನೆ ಪೂರ್ಣಚಂದ್ರನ ಮೃತ ದೇಹವನ್ನ ಗ್ರಾಮಕ್ಕೆ ತರಲಾಯಿತು. ಇಂದು ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಇಟ್ಟು, ಬಳಿಕ ಲಿಂಗಾಯತ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.