
ಬೆಳಗಾವಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದ ಬಗ್ಗೆ ಸಿ.ಎಂ ಸಿದ್ದರಾಮಯ್ಯ ಹೇಳಿಕೆಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಕುಂಭ ಮೇಳದಲ್ಲೂ ಸಹ ಕಾಲ್ತುಳಿತ ಆಗಿತ್ತು. ಅದರ ಕುರಿತು ನಾನು ಮಾತಾಡಿಲ್ಲ ಎಂದಿದ್ದ ಸಿ.ಎಂ ಹೇಳಿಕೆಗೆ ಅವರು ಪ್ರತಿಕ್ರಿಯಿಸಿ, ಕುಂಭಮೇಳದಲ್ಲಿ ಸತ್ತರು ಅಂತ ಇಲ್ಲೂ ಸಾಯ್ಬೇಕಾ ಎಂದು ಪ್ರಶ್ನಿಸಿದ್ದಾರೆ. ಕಾಲ್ತುಳಿತ ಅತ್ಯಂತ ಖಂಡನೀಯ ಮತ್ತು ದುರದೃಷ್ಟಕರವಾದ ಘಟನೆ. ಕುಂಭಮೇಳದಲ್ಲಿ ನಡೆದ ಘಟನೆಗೂ ಇದಕ್ಕೂ ಹೋಲಿಕೆ ಮಾಡಬಾರದು. ಕುಂಭಮೇಳದಲ್ಲಿ ಸತ್ತಿದ್ದಾರೆ ಇಲ್ಲೂ ಸಾಯಲಿ ಅಂತ ಸಿದ್ದರಾಮಯ್ಯನವರ ಅನಿಸಿಕೆನಾ? ಎಂದು ವಾಗ್ದಾಳಿ ನಡೆಸಿದ್ದಾರೆ.

j3tvkannada
ಬಿ.ಜೆ.ಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದರೆ, ನಿಮ್ಮ ಕಾಲದಲ್ಲಿ ಬಿದ್ದಿರಲಿಲ್ವಾ? ಎಂದು ಪ್ರಶ್ನೆ ಮಾಡ್ತಾರೆ. ಸಿದ್ದರಾಮ್ಯನವರೇ ಕೆಸರೆರಚಾಟ ನಿಮಗೆ ಶೋಭೆ ತರಲ್ಲ. ಆಗಿರುವ ತಪ್ಪನ್ನು ಒಪ್ಪಿಕೊಂಡು ಜನರ ಬಳಿ ಕ್ಷಮೆ ಕೇಳಿ. ಅಲ್ಲಿ ಸತ್ತಿದ್ದಾರೆ ಇಲ್ಲಿ ಸತ್ತರೆ ಏನು ದೊಡ್ಡ ಮಹಾನ್ ಎಂಬ ಮನೋಭಾವ ಸರಿಯಲ್ಲ. ಎರಡೂ ಪಕ್ಷದವರು ಬಾಯಿ ಮುಚ್ಕೊಂಡು ಇರಬೇಕು ಅಷ್ಟೇ ಎಂದು ಖಾರವಾಗಿ ನುಡಿದಿದ್ದಾರೆ.
ಘಟನೆಯಾದ ಸಂದರ್ಭದಲ್ಲಿಯೇ ವಿಜಯೋತ್ಸವ ನಡೆದಿದೆ. ತಕ್ಷಣ ವಿಜಯೋತ್ಸವವನ್ನು ನಿಲ್ಲಿಸಬೇಕಿತ್ತು. ಕ್ರಿಕೆಟ್ ಪ್ಲೇಯರ್ಸ್ ಹಾಗೂ ಅದಕ್ಕೆ ಸಂಬಂಧಿಸಿದ ಕಮಿಟಿಗಳು ಕೋಟಿ ಕೋಟಿ ಗಳಿಸುತ್ತಾರೆ. ಘಟನೆಯಲ್ಲಿ ಸತ್ತವರೆಲ್ಲರೂ ಸಹ ಯುವಕರೇ ಇದ್ದಾರೆ. ಒಂದು ಕೋಟಿ ರೂ. ಪರಿಹಾರವನ್ನ ಕ್ರಿಕೆಟ್ ಕಮಿಟಿಯವರೇ ಕೊಡಬೇಕು. ಅಭಿಮಾನಿಗಳಿಂದಲೇ ಕೋಟಿ ಗಳಿಸುವ ನೀವು ಅಭಿಮಾನಿಗಳಿಗೆ ಕೋಟಿ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.